ಪದ್ಯ ೩೨: ಸುರಭಟರು ಯಾವ ಕೇಳಿಗೆ ಕರೆದರು?

ಬಿರಿಯ ಮಕ್ಕಳ ತಂಡವೇ ಹೊ
ಕ್ಕಿರಿದುದವದಿರನುರುಬಿ ದಿವಿಜರು
ಜರೆದು ನೂಕಿತು ತೋಪಿನೊಳಬಿದ್ದವರ ಹೊರವಡಿಸಿ
ಮುರಿದ ತಳಿಗಳ ಬಲಿದು ಬಾಗಿಲ
ಹೊರಗೆ ನಿಂದರು ವಾರಿ ಕೇಳಿಯ
ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ (ಅರಣ್ಯ ಪರ್ವ, ೧೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕೌರವನ ಮಕ್ಕಳ ತಂಡವು ಒಳ ಹೊಕ್ಕು ಯುದ್ಧ ಮಾಡಲು ದೇವತೆಗಳು ಅವರನ್ನು ತಡೆದು ವನದ ಹೊರಕ್ಕೆ ದಬ್ಬಿದರು. ಮುರಿದಿದ್ದ ಮರದ ಕೊರಡಗಳನ್ನು ಜೋಡಿಸಿ, ಭದ್ರಪಡಿಸಿ, ಬಾಗಿಲು ಹಾಕಿ ಹೊರಕ್ಕೆ ಬಂದು ನಿಂತು ನೀವು ಜಲ ಕೇಳಿಯನ್ನು ಮರೆತು ರಕ್ತ ಕೇಳಿಗೆ ಬನ್ನಿ ಎಂದು ಕರೆದರು.

ಅರ್ಥ:
ಬರಿ: ಕೇವಲ; ಮಕ್ಕಳ: ಕುಮಾರ; ತಂಡ: ಗುಂಪು; ಹೊಕ್ಕು: ಓತ; ಅವದಿರು: ಅವರು; ಉರುಬು: ಊಬಿ; ದಿವಿಜ: ದೇವ; ಜರೆ: ಬಯ್ಯು; ನೂಕು: ತಳ್ಳು; ತೋಪು: ಗುಂಪು; ಹೊರವಡಿಸು: ಹೊರಕ್ಕೆ ತಬ್ಬು; ಮುರಿ: ಸೀಳು; ತಳಿ: ಚೆಲ್ಲು; ಬಲಿ: ಗಟ್ಟಿ, ದೃಢ; ಬಾಗಿಲು: ಕದ; ಹೊರಗೆ: ಆಚೆಗೆ; ನಿಂದು: ನಿಲ್ಲು; ವಾರಿಕೇಳಿ: ಜಲಕ್ರೀಡೆ; ಮರೆ: ಗುಟ್ಟು, ರಹಸ್ಯ; ಶೋಣಿತವಾರಿ: ರಕ್ತದ ಕ್ರೀಡೆ; ಬನ್ನಿ: ಆಗಮಿಸಿ;

ಪದವಿಂಗಡಣೆ:
ಬಿರಿಯ +ಮಕ್ಕಳ +ತಂಡವೇ +ಹೊ
ಕ್ಕಿರಿದುದ್+ಅವದಿರನ್+ಉರುಬಿ+ ದಿವಿಜರು
ಜರೆದು +ನೂಕಿತು +ತೋಪಿನೊಳಬಿದ್ದವರ +ಹೊರವಡಿಸಿ
ಮುರಿದ +ತಳಿಗಳ +ಬಲಿದು +ಬಾಗಿಲ
ಹೊರಗೆ +ನಿಂದರು +ವಾರಿ +ಕೇಳಿಯ
ಮರೆದು +ಶೋಣಿತವಾರಿ+ ಕೇಳಿಗೆ+ ಬನ್ನಿ+ ನೀವೆನುತ

ಅಚ್ಚರಿ:
(೧) ಯುದ್ಧಕ್ಕೆ ಆಮಂತ್ರಣ ನೀಡುವ ಪರಿ – ವಾರಿಕೇಳಿಯ ಮರೆದು ಶೋಣಿತವಾರಿ ಕೇಳಿಗೆ ಬನ್ನಿ ನೀವೆನುತ