ಪದ್ಯ ೭೦: ಮಂದೇಹ ಅಸುರರು ಯಾರ ಬಳಿ ಕಾಳಗ ಮಾಡಲಿಚ್ಛಿಸಿದರು?

ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು (ಅರಣ್ಯ ಪರ್ವ, ೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹರಿಹರ ಬ್ರಹ್ಮರು ಮತ್ತು ಹದಿನಾಲ್ಕು ಲೋಕದಲ್ಲಿರುವ ಎಲ್ಲಾ ದೇವತೆಗಳಲ್ಲಿ ಸೂರ್ಯನು ಅತಿ ಬಲಶಾಲಿಯೆಂಬುದನ್ನು ತಿಳಿದು ಮಂದೇಹರೆಂಬ ಅಸುರರು ಸೂರ್ಯನೊಡನೆ ಕಾಳಗ ಮಾಡಲು ಇಚ್ಛೆಪಟ್ಟರು.

ಅರ್ಥ:
ಹರಿ: ವಿಷ್ಣು; ಹರ: ಶಿವ; ವಿರಿಂಚಿ: ಬ್ರಹ್ಮ; ಉರು: ವಿಶೇಷವಾದ, ಶ್ರೇಷ್ಠವಾದ; ದೇವ: ಸುರರು; ಮತ್ತಾರು: ಉಳಿದವರು; ಜಗ: ಪ್ರಪಮ್ಚ; ತರಣಿ: ಸೂರ್ಯ; ಬಲವಂತ: ಶೂರ, ಪರಾಕ್ರಮಿ; ಅರಿ: ತಿಳಿ; ಅಸುರ: ರಾಕ್ಷಸ; ಸಾಸಿರ: ಸಾವಿರ; ಕರ: ಹಸ್ತ; ದಿನನಾಥ: ಸೂರ್ಯ; ಕಾಳಗ: ಯುದ್ಧ; ಬಯಸು: ಇಷ್ಟಪಡು;

ಪದವಿಂಗಡಣೆ:
ಹರಿ+ಹರ+ ವಿರಿಂಚಿಗಳು +ಮೊದಲಾದ್
ಉರುವ +ದೇವರುಗಳೊಳು +ಮತ್ತಾ
ತರವಿಡಿದ +ಹದಿನಾಲ್ಕು +ಜಗದೊಳಗುಳ್ಳ+ ದೇವರಲಿ
ತರಣಿ+ಅತಿ +ಬಲವಂತನ್+ಎಂಬುದನ್
ಅರಿದು+ ಮಂದೇಹಾಸುರರು+ ಸಾ
ಸಿರ +ಕರದ +ದಿನನಾಥನೊಳು +ಕಾಳಗವ +ಬಯಸಿಹರು

ಅಚ್ಚರಿ:
(೧) ದಿನನಾಥ, ತರಣಿ – ಸೂರ್ಯನನ್ನು ಕರೆದ ಪರಿ