ಪದ್ಯ ೧೭: ಕೃಷ್ಣನು ಹೇಗೆ ಕೊಲ್ಲುವವನೆಂದು ಶಿಶುಪಾಲನು ಹಂಗಿಸಿದನು?

ಅಸಗನನು ಕೆಡೆತಿವಿದು ಕಂಸನ
ವಸನವೆಲ್ಲವ ಸೆಳೆದಗಡ ಮಾ
ಣಿಸಿದನೈ ದಿಟಘಟ್ಟಿವಾಳ್ತಿಯ ಮೈಯಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸುಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ (ಸಭಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಗಸನು ಬಟ್ಟೆಗಳನ್ನು ಒಗೆಯುವ ರೀತಿ, ಈತನು ಕಂಸನ ಬಟ್ಟೆಗಳನ್ನೆಲ್ಲಾ ಸೆಳೆದುಕೊಂಡನೋ? ಮೂರುಡೊಂಕಿದ್ದ ತ್ರಿಕುಬ್ಜೆಯ ಗೂನನ್ನು ಸರಿಪಡಿಸಿದನೋ? ಕಂಸನ ಆನೆಯನ್ನು ಕೊಂದನೇ? ಮೋಸದಿಂದ ತಿವಿದು ಕೊಲ್ಲುವವನಲ್ಲವೇ ಈತ ಎಂದು ಕೃಷ್ಣನನ್ನು ಹಂಗಿಸಿದನು.

ಅರ್ಥ:
ಅಸಗ: ಅಗಸ, ರಜಕ; ಕೆಡೆ: ಬೀಳು; ತಿವಿ: ಚುಚ್ಚು; ವಸನ: ಬಟ್ಟೆ; ಸೆಳೆ: ಜಗ್ಗು, ಎಳೆ; ಗಡ: ಅಲ್ಲವೇ; ಮಾಣಿಸು: ನಿಲ್ಲುವಂತೆ ಮಾಡು; ದಿಟ: ಸತ್ಯ, ನೈಜ; ಘಟ್ಟಿ: ಹೆಪ್ಪುಗಟ್ಟಿದುದು, ಘನರೂಪವಾದುದು; ಮೈಯ: ತನು, ದೇಹ; ಮೂಹೊರಡು: ಮೂರುಡೊಂಕು; ಮಸಗು: ಹರಡು, ಕೆರಳು; ಬೀಸು: ಹೊಡೆ; ಆನೆ: ಕರಿ; ಅಸು: ಪ್ರಾಣ: ಬಡಿ: ಹೊಡೆ; ಮಲ್ಲ: ಕುಸ್ತಿಪಟು, ಜಟ್ಟಿ; ಮರ್ದಿಸು: ಕೊಲ್ಲು; ಡೊಳ್ಳಾಸ: ಮೋಸ, ಕಪಟ; ಡಾವರಿಗ: ಶೌರ್ಯ, ಶೂರ;

ಪದವಿಂಗಡಣೆ:
ಅಸಗನನು +ಕೆಡೆತಿವಿದು+ ಕಂಸನ
ವಸನವೆಲ್ಲವ +ಸೆಳೆದ+ಗಡ+ ಮಾ
ಣಿಸಿದನೈ +ದಿಟಘಟ್ಟಿವಾಳ್ತಿಯ +ಮೈಯ+ಮೂಹೊರಡ
ಮಸಗಿ+ ಬೀಸುವ +ಕಂಸನ+ಆನೆಯನ್
ಅಸುಬಡಿದ +ಗಡ +ಮಲ್ಲರನು +ಮ
ರ್ದಿಸಿದನೇ +ಡೊಳ್ಳಾಸದಲಿ +ಡಾವರಿಗನಹನೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಅಸುಬಡಿದ ಪದದ ಬಳಕೆ
(೨) ಜೋಡಿ ಪದಗಳು – ಮಲ್ಲರನು ಮರ್ದಿಸಿದನೇ; ಡೊಳ್ಳಾಸದಲಿ ಡಾವರಿಗನಹನೆಂದ