ಸರಳ ಸೊಂಪಿನ ಸೋಹಿನಲಿ ನಿರಿ
ಗರುಳ ದಾವಣಿವಲೆಗಳಲಿ ಸಂ
ಗರದ ಸುಭಟವ್ರಜದ ಮಧ್ಯದ ಗೂಡುವಲೆಗಳಲಿ
ಉರುಗದೆಯ ದಡಿವಲೆಯಲಸಿ ಮು
ದ್ಗರದ ಸಿಡಿವಲೆಗಳಲಿ ಸಮರದೊ
ಳರಿಮೃಗವ್ರಾತವನು ಭೀಮಕಿರಾತ ಕೈಕೊಂಡ (ದ್ರೋಣ ಪರ್ವ, ೧೨ ಸಂಧಿ, ೩೧ ಪದ್ಯ)
ತಾತ್ಪರ್ಯ:
ಅಗಣಿತ ಬಾಣಗಳಿಂದ ಸೋವಿ, ಕರುಳುಗಳ ದಾವಣಿ ಬಲೆಯನ್ನು ಬೀಸಿ, ಮುಂಡದ ಗೂಡು ಬಲೆಗಳು, ಗದೆಯ ದಡಿವಲೆ, ಮುದ್ಗರದ ಸಿಡಿಬಲೆಗಳಲ್ಲಿ ಶತ್ರುಗಳೆಂಬ ಮೃಗಗಳನ್ನು ಭೀಮನೆಂಬ ಕಿರಾತನು ಬೇಟೆಯಾಡಿದನು.
ಅರ್ಥ:
ಸರಳು: ಬಾಣ; ಸೊಂಪು: ಸೊಗಸು, ಚೆಲುವು; ಸೋಹು: ಅಟ್ಟು, ಓಡಿಸು; ನಿರಿ: ಕೊಲ್ಲು, ಸಾಯಿಸು; ಕರುಳು: ಪಚನಾಂಗ; ದಾವಣಿ: ಮೂಗುದಾರ, ನಿಯಂತ್ರಣ; ಅಲೆ: ನಿವಾರಿಸು, ಚಲಿಸು; ಸಂಗರ: ಯುದ್ಧ; ಸುಭಟ: ಪರಾಕ್ರಮಿ; ವ್ರಜ: ಗುಂಪು; ಮಧ್ಯ: ನಡುವೆ; ಗೂಡು: ಪಂಜರ, ಮನೆ; ಉರು: ವಿಶೇಷವಾದ; ಗದೆ: ಮುದ್ಗರ; ದಡಿ: ಕೋಲು; ಅಸಿ: ಕತ್ತಿ; ಮುದ್ಗರ: ಗದೆ; ಸಿಡಿ: ಚಿಮ್ಮು; ಸಮರ: ಯುದ್ಧ; ಅರಿ: ವೈರಿ; ಮೃಗ: ಪ್ರಾಣಿ; ವ್ರಾತ: ಗುಂಪು; ಕಿರಾತ: ಬೇಡ;
ಪದವಿಂಗಡಣೆ:
ಸರಳ +ಸೊಂಪಿನ +ಸೋಹಿನಲಿ+ ನಿರಿ
ಕರುಳ+ ದಾವಣಿವ್+ಅಲೆಗಳಲಿ+ ಸಂ
ಗರದ +ಸುಭಟ+ವ್ರಜದ +ಮಧ್ಯದ +ಗೂಡುವ್+ಅಲೆಗಳಲಿ
ಉರು+ಗದೆಯ +ದಡಿವ್+ಅಲೆಯಲಸಿ+ ಮು
ದ್ಗರದ +ಸಿಡಿವ್+ಅಲೆಗಳಲಿ +ಸಮರದೊಳ್
ಅರಿ+ಮೃಗ+ವ್ರಾತವನು +ಭೀಮಕಿರಾತ +ಕೈಕೊಂಡ
ಅಚ್ಚರಿ:
(೧) ಭೀಮನನ್ನು ಭೀಮಕಿರಾತ ಎಂದು ಕರೆದಿರುವುದು
(೨) ಸ ಕಾರದ ತ್ರಿವಳಿ ಪದ – ಸರಳ ಸೊಂಪಿನ ಸೋಹಿನಲಿ