ಪದ್ಯ ೫೧: ದುರ್ಯೋಧನನು ಗಾಂಧಾರಿಗೆ ಏನು ಹೇಳಿದ?

ತಾಯೆ ನೇಮವಗೊಂಡೆನಯ್ಯಂ
ಗಾ ಯುಧಿಷ್ಠಿರನಾತ್ಮಜನಲೇ
ವಾಯುಸುತ ನರ ನಕುಲ ಸಹದೇವರು ಕುಮಾರರಲೆ
ಈ ಯುಗದಲಿನ್ನವರ ಸಂತತಿ
ದಾಯಭಾಗಿಗಳಾಗಿ ಬದುಕಲಿ
ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ (ಸಭಾ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಗಾಂಧಾರಿಗೆ, ಅಮ್ಮ ನಾನು ಹೊರಡಲು ನಿಮ್ಮ ಅಪ್ಪಣೆಯನ್ನು ತೆಗೆದುಕೊಂಡಿದ್ದೇನೆ, ಅಪ್ಪನಿಗೆ ಧರ್ಮಜ, ಭೀಮ, ಅರ್ಜುನ, ನಕುಲ ಸಹದೇವರು ಮಕ್ಕಳಲ್ಲವೇ? ಈಗ ಇನ್ನು ಮುಂದೆ ಅವರ ಮಕ್ಕಳುಗಳೇ ನಮ್ಮ ಪಾಲನ್ನು ಪಡೆದುಕೊಂಡು ಸುಖವಾಗಿ ಬಾಳಲಿ, ನಮ್ಮನ್ನು ಕಾಪಾಡುವ ಬೇರೆಯ ರಾಜರು ಇಲ್ಲವೇ ಎಂದು ಅಮ್ಮನ ಮನಸ್ಸನ್ನು ತನ್ನೆಡೆಗೆ ಪರಿವರ್ತಿಸುವ ಯೋಚನೆಯಿಂದ ಮಾತನಾಡಿದನು.

ಅರ್ಥ:
ತಾಯೆ: ಮಾತೆ, ಅಮ್ಮ; ನೇಮ: ನಿಯಮ; ಅಯ್ಯ: ತಮ್ದೆ; ಆತ್ಮಜ: ಮಗ; ವಾಯುಸುತ: ಭೀಮ; ವಾಯು: ಗಾಳಿ; ಸುತ: ಮಗ; ನರ: ಅರ್ಜುನ; ಕುಮಾರ: ಮಕ್ಕಳು; ಯುಗ: ಸಮಯ; ಸಂತತಿ: ವಂಶ; ದಾಯ: ಹಂಚಿಕೆ, ಉಪಾಯ; ಭಾಗ: ಅಂಶ, ಪಾಲು; ಬದುಕು: ಜೀವನ; ರಾಯ: ದೊರೆ; ರಕ್ಷಿಸು: ಪೋಷಿಸು, ಕಾಪಾಡು;

ಪದವಿಂಗಡಣೆ:
ತಾಯೆ +ನೇಮವಗೊಂಡ್+ಎನ್+ಅಯ್ಯಂಗ್
ಆ+ ಯುಧಿಷ್ಠಿರನ್+ಆತ್ಮಜನಲೇ
ವಾಯುಸುತ +ನರ +ನಕುಲ +ಸಹದೇವರು +ಕುಮಾರರಲೆ
ಈ +ಯುಗದಲಿನ್+ಅವರ +ಸಂತತಿ
ದಾಯಭಾಗಿಗಳಾಗಿ+ ಬದುಕಲಿ
ರಾಯರಿಲ್ಲಾ+ ಮತ್ತೆ +ನಮ್ಮನು +ರಕ್ಷಿಸುವರೆಂದ

ಅಚ್ಚರಿ:
(೧)ತಾಯಿಯ ಮನಸ್ಸಿನ ಮೇಲೆ ಕನಿಕರ ಬರಲೆಂದು ಹೇಳುವ ನುಡಿಗಳು – ರಾಯರಿಲ್ಲಾ ಮತ್ತೆ ನಮ್ಮನು ರಕ್ಷಿಸುವರೆಂದ