ಪದ್ಯ ೨೦: ಧರ್ಮಜನು ಭೀಮನಿಗೆ ಯಾವ ಕಿವಿಮಾತನ್ನು ಹೇಳಿದನು?

ಅಳಲಿದತಿಭಂಗಿಸಲು ಪರಮಂ
ಡಳಿಕರೇ ನಾವ್ ಪಾಂಡುವಿನ ಮ
ಕ್ಕಳುಗಳಾ ಧೃತರಾಷ್ಟ್ರ ತನುಸಂಭವರು ಕೌರವರು
ನೆಲನ ಹುದುವಿನ ದಾಯಭಾಗದ
ಕಳವಳದೊಳ್+ಆಯ್ತಲ್ಲದುಳಿದಂ
ತೊಳಗು ಭಿನ್ನವೆ ಭೀಮ ಬಿಡು ಭಂಗಿಸದೆ ಸಾರೆಂದ (ಗದಾ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ತುಂಬ ಬೇಸರಗೊಂಡು, ಶತ್ರುವನ್ನು ಅಪಮಾನಗೊಳಿಸಲು ನಾವೇನು ಪರರಾಜರೇ? ನಾವು ಪಾಂಡುವಿನ ಮಕ್ಕಳು. ಕೌರವರು ಧೃತರಾಷ್ಟ್ರನ ಮಕ್ಕಳು ನಮ್ಮ ಸಂಬಂಧಿಕರು, ಏನೋ ಭೂಮಿಯ ದಾಯಭಾಗದಲ್ಲಿ ಯುದ್ಧವಾಯಿತು. ಅಷ್ಟೇ ಹೊರತು ನಾವು ನಿಜವಾಗಿಯೂ ಬೇರೆಯವರೇ? ಭೀಮ ಭಂಗಿಸದೆ ನಡೆ ಎಂದು ಧರ್ಮಜನು ನುಡಿದನು.

ಅರ್ಥ:
ಅಳಲು: ದುಃಖಿಸು; ಅತಿ: ಬಹಳ; ಭಂಗ: ಮುರಿ; ಮಂಡಳೀಕ: ಸಾಮಂತರಾಜ; ಪರ: ವಿರೋಧಿ; ಮಕ್ಕಳು: ಪುತ್ರರು; ತನು: ದೇಹ; ಸಂಭವ: ಹುಟ್ಟು; ನೆಲ: ಭೂಮಿ; ಹುದು: ಕೂಡುವಿಕೆ, ಸೇರುವಿಕೆ; ದಾಯ:ಪಗಡೆಯ ಗರ, ಅವಕಾಶ; ಭಾಗ: ಅಂಶ, ಪಾಲು; ಕಲವಳ: ಗೊಂದಲ; ಉಳಿದ: ಮಿಕ್ಕ; ತೊಳಗು: ಕಾಂತಿ, ಪ್ರಕಾಶ; ಭಿನ್ನ: ಚೂರು, ತುಂಡು; ಬಿಡು: ತೊರೆ; ಸಾರು: ಪ್ರಕಟಿಸು, ಘೋಷಿಸು;

ಪದವಿಂಗಡಣೆ:
ಅಳಲಿದ್+ಅತಿ+ಭಂಗಿಸಲು +ಪರಮಂ
ಡಳಿಕರೇ +ನಾವ್ +ಪಾಂಡುವಿನ +ಮ
ಕ್ಕಳುಗಳಾ +ಧೃತರಾಷ್ಟ್ರ+ ತನುಸಂಭವರು+ ಕೌರವರು
ನೆಲನ +ಹುದುವಿನ +ದಾಯಭಾಗದ
ಕಳವಳದೊಳಾಯ್ತಲ್ಲದ್+ಉಳಿದಂ
ತೊಳಗು +ಭಿನ್ನವೆ+ ಭೀಮ +ಬಿಡು +ಭಂಗಿಸದೆ +ಸಾರೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಭಿನ್ನವೆ ಭೀಮ ಬಿಡು ಭಂಗಿಸದೆ
(೨) ಕೌರವರಾರು? ಧೃತರಾಷ್ಟ್ರ ತನುಸಂಭವರು ಕೌರವರು