ರಾಯನಾಸ್ಥಾನದಲಿ ಖೂಳರ
ರಾಯ ನೀನೇ ಭಂಗಪಡಿಸಿ ನ
ವಾಯದಲಿ ನಿಮ್ಮೂರಿಗೆಮ್ಮೈವರನು ನೀ ಕರಸಿ
ವಾಯದಲಿ ಜೂಜಾಡಿ ಕಪಟದ
ದಾಯದಲಿ ಸೋಲಿಸಿ ಯುಧಿಷ್ಠಿರ
ರಾಯನರಸಿಯ ಸುಲಿಸಿತಕೆ ಫಲವಾಯ್ತೆ ಹೇಳೆಂದ (ಗದಾ ಪರ್ವ, ೮ ಸಂಧಿ, ೧೨ ಪದ್ಯ)
ತಾತ್ಪರ್ಯ:
ಎಲೈ ದುರ್ಯೋಧನ, ಖೂಳರ ರಾಜನೇ, ನಿಮ್ಮೂರಿಗೆ ನಮ್ಮೈವರನ್ನು ಕರೆಸಿ, ಜೂಜಾಡಿ, ಮೋಸದ ಲೆಕ್ಕದಿಂದ ನಮ್ಮನ್ನು ಸೋಲಿಸಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಕೈಹಾಕಿದ ಫಲ ದೊರಕಿತೇ ಹೇಳು ಎಂದು ಭೀಮನು ದುರ್ಯೊಧನನನ್ನು ಕೇಳಿದನು.
ಅರ್ಥ:
ರಾಯ: ರಾಜ; ಆಸ್ಥಾನ: ದರ್ಬಾರು; ಖೂಳ: ದುಷ್ಟ; ಭಂಗ: ಮುರಿ; ನವಾಯ: ಹೊಸದಾದ; ಊರು: ಪಟ್ಟಣ; ಕರಸು: ಬರೆಮಾಡು; ವಾಯ: ಮೋಸ, ಕಪಟ; ಜೂಜು: ಪಗಡೆಯಾಟ; ಕಪಟ: ಮೋಸ; ದಾಯ: ಪಗಡೆಯ ಗರ; ಸೋಲಿಸು: ಪರಾಭವವಾಗು; ಅರಸಿ: ರಾಣಿ; ಸುಲಿ: ತೆಗೆ, ಕಳಚು; ಫಲ: ಪ್ರಯೋಜನ; ಹೇಳು: ತಿಳಿಸು;
ಪದವಿಂಗಡಣೆ:
ರಾಯನ್+ಆಸ್ಥಾನದಲಿ +ಖೂಳರ
ರಾಯ +ನೀನೇ +ಭಂಗಪಡಿಸಿ +ನ
ವಾಯದಲಿ +ನಿಮ್ಮೂರಿಗ್+ಎಮ್ಮೈವರನು +ನೀ +ಕರಸಿ
ವಾಯದಲಿ +ಜೂಜಾಡಿ +ಕಪಟದ
ದಾಯದಲಿ +ಸೋಲಿಸಿ +ಯುಧಿಷ್ಠಿರ
ರಾಯನ್+ಅರಸಿಯ +ಸುಲಿಸಿತಕೆ +ಫಲವಾಯ್ತೆ+ ಹೇಳೆಂದ
ಅಚ್ಚರಿ:
(೧) ನವಾಯ, ವಾಯ, ದಾಯ, ರಾಯ – ಪ್ರಾಸ ಪದಗಳು
(೨) ದುರ್ಯೋಧನನನ್ನು ಖೂಳರ ರಾಯ ಎಂದು ಕರೆದಿರುವುದು