ಪದ್ಯ ೨೧: ಅರ್ಜುನನು ಏಕೆ ಧೈರ್ಯ ಕಳೆದುಕೊಂಡನು?

ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದಉ ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ (ಕರ್ಣ ಪರ್ವ, ೨೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಒಡೆಯ ನಾನು ಏನೆಂದು ಹೇಳಲಿ, ಅರ್ಜುನನು ಕರ್ಣನಿಗೆ ಏನಾಗಬೇಕೋ ಏನೋ? ಶ್ರೀಕೃಷ್ಣನ ಮಾತನ್ನು ಕೇಳಿ, ಅವನು ಚಿಂತೆಯಿಂದ ಜಡನಾದನು. ಅವನ ಶೋಕವು ಸ್ವಾಮಿಭಾನವೆಂಬ ಸರ್ಪವನ್ನು ಕೊಂದು ಧೈರ್ಯನಿಧಿಯನ್ನು ಅಪಹರಿಸಿತು.

ಅರ್ಥ:
ಜೀಯ: ಒಡೆಯ; ಏನಹು: ಏನನ್ನೆಲಿ; ಬಳಿಕ: ನಂತರ; ದಾನವಾರಿ: ರಾಕ್ಷಸರ ವೈರಿ; ನುಡಿ: ಮಾತು; ಕೇಳು: ಆಲಿಸು; ಗ್ಲಾನಿ: ಬಳಲಿಕೆ, ದಣಿವು; ಮುಳುಗು: ಮರೆಯಾಗು, ಹುದುಗಿರು; ಮನ: ಮನಸ್ಸು; ಅಭಿಮಾನ: ಹೆಮ್ಮೆ, ಅಹಂಕಾರ; ಸರ್ಪ: ಹಾವು; ಕೆಡಹು: ಹೊಡೆ; ಧೈರ್ಯ: ಎದೆಗಾರಿಕೆ, ಕೆಚ್ಚು, ದಿಟ್ಟತನ; ನಿಧಾನ: ವಿಳಂಬ, ಸಾವಕಾಶ; ಸೂರೆ: ಕೊಳ್ಳೆ, ಲೂಟಿ; ಶೋಕ: ದುಃಖ;

ಪದವಿಂಗಡಣೆ:
ಏನನೆಂಬೆನು +ಜೀಯ +ಕರ್ಣಂಗ್
ಏನಹನೊ+ ಫಲುಗುಣನು +ಬಳಿಕ+ಆ
ದಾನವಾರಿಯ +ನುಡಿಯ +ಕೇಳಿದು+ ಕೇಳಿದಾಕ್ಷಣಕೆ
ಗ್ಲಾನಿಯಲಿ +ಮುಳುಗಿದನು +ಮನದ್+ಅಭಿ
ಮಾನ +ಸರ್ಪನ +ಕೆಡಹಿ +ಧೈರ್ಯ+ನಿ
ಧಾನವನು +ಕೈಸೂರೆಗೊಂಡುದು +ಶೋಕವ್+ಅರ್ಜುನನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗ್ಲಾನಿಯಲಿ ಮುಳುಗಿದನು ಮನದಭಿಮಾನ ಸರ್ಪನ ಕೆಡಹಿ ಧೈರ್ಯನಿಧಾನವನು ಕೈಸೂರೆಗೊಂಡುದು ಶೋಕವರ್ಜುನನ