ಪದ್ಯ ೫೮: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ (ಗದಾ ಪರ್ವ, ೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಆನೆಯ ಕವಚಗಳನ್ನು ಕಿತ್ತು, ಜೋದರ ಮುಂದಲೆಗಳನ್ನು ಎಳೆದು ಅವರನ್ನು ಕಾಲಿನಿಂದ ಮೆಟ್ಟಿದನು. ಗುಂಪುಗುಂಪಾಗಿ ಬಂದ ಸೈನ್ಯದ ಮೇಲೆ ಹಾಯ್ದು ಹೊಯ್ದನು. ದಾಡೆಗಳನ್ನು ಕಿತ್ತು ಸೊಂಡಿಲುಗಳನ್ನು ಕಡಿದು, ಬಾಲವನ್ನು ಸೆಳೆದು ಆನೆಗಳನ್ನು ಕೊಡವಿ ಎಸೆದನು.

ಅರ್ಥ:
ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಉಗಿ: ಹೊರಹಾಕು; ಆರೋಹಕ: ಆನೆ, ಕುದುರೆ ಮೇಲೆ ಕೂತು ಹೋರಾಡುವ ಸೈನಿಕ; ಮುಂದಲೆ: ತಲೆಯ ಮುಂಭಾಗ; ಸೆಳೆ: ಜಗ್ಗು, ಎಳೆ; ಮೆಟ್ಟು: ತುಳಿ; ಒಡ್ಡು: ರಾಶಿ, ಸಮೂಹ; ಹಾಯ್ದು: ಹೊಡೆ, ಮೇಲೆಬೀಳು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಳಚು: ಬೇರ್ಪಡಿಸು; ದಾಡೆ: ದಂತ; ಭರಿಕೈ: ಸೊಂಡಿಲು; ತುಂಡು: ಚೂರು; ವಾಲಧಿ: ಬಾಲ; ಬರ: ಹತ್ತಿರ; ಸೆಳೆ: ಹಿಡಿ; ಕೊಡಹು: ತಳ್ಳು; ಆನೆ: ಕರಿ; ವಿಧಾನ: ರೀತಿ;

ಪದವಿಂಗಡಣೆ:
ಗುಳವನ್+ಉಗಿದ್+ಆರೋಹಕರ+ ಮುಂ
ದಲೆಯ +ಸೆಳೆದೊಡ+ಮೆಟ್ಟಿದನು +ಮಂ
ಡಳಿಸಿದ್+ಒಡ್ಡಿನ +ಮೇಲೆ +ಹಾಯ್ದನು +ಹೊಯ್ದನ್+ಉರವಣಿಸಿ
ಕಳಚಿದನು +ದಾಡೆಗಳ +ಭರಿಕೈ
ಗಳನು +ತುಂಡಿಸಿ +ವಾಲಧಿಯ +ಬರ
ಸೆಳೆದು +ಕೊಡಹಿದನ್+ಆನೆಗಳ +ನಾನಾ+ವಿಧಾನದಲಿ

ಅಚ್ಚರಿ:
(೧) ಆನೆಯನ್ನು ಹೊರಹಾಕಿದ ಪರಿ – ಕಳಚಿದನು ದಾಡೆಗಳ ಭರಿಕೈಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ

ಪದ್ಯ ೧೬: ಸೈನಿಕರ ಹೋರಾಟ ಹೇಗಿತ್ತು?

ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ (ಶಲ್ಯ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆನೆಗಳ ದಾಡೆಗಳನ್ನೂ ಸೊಂಡಿಲನ್ನೂ ಮುರಿಯುವಂತೆ ಪಾರಕರು ಹೊಡೆದರು, ಮೇಲೆ ಬಿದ್ದರೆ ಭಲ್ಲೆಹದಿಂದ ಆನೆಯನ್ನು ಆಚೆಗೆ ದೂಕಿದರು. ತಮ್ಮ ಮೇಲೆ ಆಕ್ರಮಿಸಿದರೆ ರಾವುತರು ನಾಲ್ಕು ತುಂಡು ಮಾಡಿದರು. ರಾವುತರು ರಾವುತರನ್ನು ಕೊಂದರು. ಸಂಕುಲ ಸಮರದಲ್ಲಿ ಅತಿಶಯವಾದ ಸಾಹಸವನ್ನು ತೋರಿದರು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಗಜ: ಆನೆ; ದಾಡೆ: ದವಡೆ, ಒಸಡು; ಕೈ: ಹಸ್ತ; ಹರಿ: ಸೀಳು; ಪಾರಕ: ದಾಟಿಸುವವನು, ಆಚೀಚೆ ಚಲಿಸುವವ; ಮುಕ್ಕುರು: ಮೇಲೆ ಬೀಳು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೇಳು; ಕರಿಘಟೆ: ಆನೆಯ ಗುಂಪು; ತರುಬು: ತಡೆ, ನಿಲ್ಲಿಸು; ಕಡಿ: ಸೀಳು; ತೋರಿಸು: ಗೋಚರಿಸು; ಮೆರೆ: ಪ್ರಕಾಶ; ಉರೆ: ಹೆಚ್ಚು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತರುಬು: ತಡೆ, ನಿಲ್ಲಿಸು; ತನಿ: ಚೆನ್ನಾಗಿ ಬೆಳೆದುದು; ಚೂಣಿ:ಮುಂದಿನ ಸಾಲು; ಮಸಗು: ಹರಡು; ಕೆರಳು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಒರಲೆ +ಗಜ +ದಾಡೆಗಳ +ಕೈಗಳ
ಹರಿಯಹೊಯ್ದರು +ಪಾರಕರು +ಮು
ಕ್ಕುರಿಕಿದರೆ +ಸಬಳಿಗರು +ಕೋದೆತ್ತಿದರು +ಕರಿ+ಘಟೆಯ
ತರುಬಿದರೆ +ಕಡಿನಾಲ್ಕ +ತೋರಿಸಿ
ಮೆರೆದರ್+ಉರೆ +ರಾವುತರು +ರಾವ್ತರ
ತರುಬಿದರು +ತನಿಚೂಣಿ +ಮಸಗಿತು+ ತಾರು+ಥಟ್ಟಿನಲಿ

ಅಚ್ಚರಿ:
(೧) ಗಜ, ಕರಿ; ಘಟೆ, ಥಟ್ಟು – ಸಮಾನಾರ್ಥಕ ಪದ

ಪದ್ಯ ೧೭: ನಾರಾಯಣಾಸ್ತ್ರದ ತಾಪ ಎಂತಹದು?

ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು (ದ್ರೋಣ ಪರ್ವ, ೧೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಕಾವಿಗೆ ಸಮುದ್ರವು ಕುದಿದು ಜಲಚರಗಳು ನೋವಿನಿಂದ ಒದರಿದವು. ಭೂಮಿ ಅರಣ್ಯಗಳು ಸೀದುಹೋದವು. ಕುಲಪರ್ವತಗಳು ಸಿಡಿದವು. ಅಷ್ಟ ದಿಗ್ಗಜಗಳು ತಾಪವನ್ನು ತಾಳಲಾರದೆ ನೆತ್ತಿಯನ್ನು ತಗ್ಗಿಸಿ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದವು. ಆದಿಶೇಷನು ಹೆಡೆಬಾಗಿ ಮಣಿಗಳಿಂದಲೇ ಭೂಮಿಯನ್ನು ಹೊತ್ತನು.

ಅರ್ಥ:
ಒಳಗೆ: ಆಂತರ್ಯ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ಕುದಿ: ಮರಳು; ಜಲಧಿ: ಸಾಗರ; ಕಾದು: ಬಿಸಿಯಾಗು; ಧರಣಿ: ಭೂಮಿ; ಸೀದು: ಕರಕಲಾಗು; ಕುಲಗಿರಿ: ದೊಡ್ಡ ಬೆಟ್ಟ; ಉರೆ: ಹೆಚ್ಚು; ಸಿಡಿ: ಸೀಳು; ಸೀಕರಿ: ಸೀಕಲು, ಕರಿಕು; ವನ: ಕಾಡು; ನಿಕರ: ಗುಂಪು; ನೆಲ: ಭೂಮಿ; ದಾಡೆ: ದವಡೆ, ಒಸಡು; ಕೊಟ್ಟು: ನೀದು; ಕುಂಭಸ್ಥಳ: ಆನೆಯ ನೆತ್ತಿ; ತೆಗೆ: ಹೊರತರು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ತತಿ: ಗುಂಪು; ಹೆಡೆ: ಹಾವಿನ ಬಿಚ್ಚಿದ ತಲೆ, ಫಣಿ; ನಳಿ: ಬಾಗು; ಮಣಿ: ಬೆಲೆಬಾಳುವ ರತ್ನ; ಅವನಿ: ಭೂಮಿ; ಉರಗಪತಿ: ಆದಿಶೇಷ;

ಪದವಿಂಗಡಣೆ:
ಒಳಗೆ +ಜಲಚರವೊದರೆ +ಕುದಿದುದು
ಜಲಧಿ +ಕಾದುದು +ಧರಣಿ+ ಸೀದುದು
ಕುಲಗಿರಿಗಳ್+ಉರೆ +ಸಿಡಿದು +ಸೀಕರಿವೋಯ್ತು +ವನ+ನಿಕರ
ನೆಲಕೆ +ದಾಡೆಯ +ಕೊಟ್ಟು +ಕುಂಭ
ಸ್ಥಳವ +ತೆಗೆದವು +ದಿಗಿಭತತಿ+ ಹೆಡೆ
ನಳಿಯೆ +ಮಣಿಗಳಲಾಂತನ್+ಅವನಿಯನ್+ಉರಗಪತಿ+ಅಂದು

ಅಚ್ಚರಿ:
(೧) ಕುದಿದುದು, ಕಾದುದು, ಸೀದುದು, ಸಿಡಿದು – ಪದಗಳ ಬಳಕೆ
(೨) ಒಂದೇ ಪದದ ಪ್ರಯೋಗ – ಮಣಿಗಳಲಾಂತನವನಿಯನುರಗಪತಿಯಂದು

ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ

ಪದ್ಯ ೪೪: ಘಟೋತ್ಕಚನು ಹೇಗೆ ಕಂಡನು?

ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮುರಿದಲೆಯ ಚರಣದ
ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ
ನಿಡಿಯೊಡಲ ಮುರಿಮೀಸೆಗಳ ಕೆಂ
ಪಡರ್ದ ಕಂಗಲ ಹೊಳೆವ ದಾಡೆಯ
ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈ ತಂದ (ದ್ರೋಣ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕೈಯಲ್ಲಿ ಲಾಲವಿಂಡಿಗೆಯಂತಹ ಚೂಪಾದ ಆಯುಧವನ್ನು ಹಿಡಿದು, ಉಬ್ಬಿದ್ದ ತೋಳಿನ ಮಾಂಸಖಂಡಗಳ, ಕೊಂಕು ಕೂದಲಿನ ತಲೆಯ, ಕಾಲಿಗೆ ಕಟ್ಟಿದ ಬಳೆಯ ಧ್ವನಿ, ಪೆಂಡೆಯದ ಸದ್ದಿನ, ಉದ್ದ ದೇಹದ, ತಿರುವಿದ ಮೀಸೆಗಳ, ಕೆಂಗಣ್ಣುಗಳ, ಹೊಳೆವ ಹಲ್ಲುಗಳ ದೊಡ್ಡದೇಹದ ರಾಕ್ಷಸನು ಬಂದನು. ಅವನಿಡುವ ಹೆಜ್ಜೆಗೆ ಭೂಮಿಯು ಕುಗ್ಗಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಹಿರಿ: ಹೆಚ್ಚು; ಉಬ್ಬಣ: ಲಾಳವಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮುರಿ: ಸೀಳು; ತಲೆ: ಶಿರ; ಚರಣ: ಪಾದ; ತೊಡರು: ಸಂಕೋಲೆ, ಸರಪಳಿ; ಮೊಳಗು: ಧ್ವನಿಮಾಡು, ಶಬ್ದ ಮಾಡು; ಬಾವುಲಿ: ಒಂದು ಬಗೆಯ ಕಿವಿಯಾಭರಣ; ಘಣ: ಶಬ್ದವನ್ನು ಸೂಚಿಸುವ ಪದ; ಧ್ವನಿ: ಶಬ್ದ; ನಿಡಿ: ಉದ್ದವಾದ; ಒಡಲು: ದೇಹ; ಮುರಿ: ಸೀಳು; ಕಂಗಳು: ಕಣ್ಣು, ನಯನ; ಹೊಳೆ: ಪ್ರಕಾಶ; ದಾಡೆ: ದವಡೆ, ಒಸಡು; ದಡಿಗ: ಬಲಶಾಲಿ; ದಾನವ: ರಾಕ್ಷಸ; ಹೆಜ್ಜೆ: ಪಾದ; ನೆಗ್ಗು: ಕುಗ್ಗು, ಕುಸಿ; ಐತಂದು: ಬಂದು ಸೇರು;

ಪದವಿಂಗಡಣೆ:
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ +ಮುರಿ+ತಲೆಯ +ಚರಣದ
ತೊಡರ +ಮೊಳಗಿನ+ ಬಾವುಲಿಗಳಲಿ +ಘಣಘಣ+ ಧ್ವನಿಯ
ನಿಡಿ+ಒಡಲ +ಮುರಿ+ಮೀಸೆಗಳ +ಕೆಂ
ಪಡರ್ದ+ ಕಂಗಳ +ಹೊಳೆವ +ದಾಡೆಯ
ದಡಿಗ +ದಾನವನ್+ಅವನಿ +ಹೆಜ್ಜೆಗೆ +ನೆಗ್ಗಲ್+ಐತಂದ

ಅಚ್ಚರಿ:
(೧) ಘಟೋತ್ಕಚನ ಆಗಮನದ ಶಬ್ದ – ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ

ಪದ್ಯ ೭೪: ಸುಪ್ರತೀಕಗಜದ ಅಂತ್ಯವು ಹೇಗಾಯಿತು?

ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕುರಮ್ಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡುಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ (ದ್ರೋಣ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಎಲವೆಲವೋ, ಭಗದತ್ತ, ನಿನ್ನ ಪರಾಕ್ರಮದ ಆಳವನ್ನು ಇನ್ನು ತೋರಿಸು, ಎನ್ನುತ್ತಾ ಅರ್ಜುನನು ಹೊಳೆ ಹೊಳೆವ ಬಾಣದಿಂದ ಆನೆಯ ತಲೆಗೆ ಹೊಡೆಯಲು, ಬಾಣವು ನೆತ್ತಿಯನ್ನು ಸೀಳಿತು. ಗರಿಗಳು ಹೊರಬಂದವು. ದಿಗ್ಗಜ ಸುಪ್ರತೀಕವು ತನ್ನ ದಂತಗಳನ್ನು ನೆಲಕ್ಕೂರಿ ಬಿದ್ದಿತು.

ಅರ್ಥ:
ಕಲಿ: ಶೂರ; ದಳ: ಸೈನ್ಯ; ತೋರು: ಪ್ರದರ್ಶಿಸು; ಹೊಳೆ: ಪ್ರಕಾಶ; ಕೂರಂಬು: ಹರಿತವಾದ ಬಾಣ; ಕೋದು: ಹೊಡೆ; ಗಜ: ಆನೆ; ಮಸ್ತಕ: ತಲೆ; ನಿಲುಕು: ಚಾಚುವಿಕೆ; ನೆತ್ತಿ: ಶಿರ; ಒಡೆ: ಸೀಳು; ಹಾಯ್ದು: ಹೊಡೆ; ಬಾಣ: ಸರಳು; ದಿಕ್ಕರಿ: ದಿಗ್ಗಜ; ನೆಲ: ಭೂಮಿ; ದಾಡೆ: ದವಡೆ; ಊರು: ತೊಡೆ; ಗಜ: ಆನೆ;

ಪದವಿಂಗಡಣೆ:
ಎಲವೆಲವೊ +ಭಗದತ್ತ +ಕಲಿತನದ್
ಅಳವ +ತೋರಿನ್ನೆನಗ್+ಎನುತ +ಹೊಳೆ
ಹೊಳೆವ+ ಕೂರಂಬಿನಲಿ +ಕೋದನು +ಗಜದ +ಮಸ್ತಕವ
ನಿಲುಕಿ+ ನೆತ್ತಿಯನೊಡೆದು +ನಿಡುಪ
ಚ್ಚಳಕೆ+ ಹಾಯ್ದವು +ಬಾಣ +ದಿಕ್ಕರಿ
ನೆಲಕೆ +ದಾಡೆಯನೂರಿ+ ಕೆಡೆದುದು +ಸುಪ್ರತೀಕಗಜ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಲುಕಿ ನೆತ್ತಿಯನೊಡೆದು ನಿಡುಪಚ್ಚಳಕೆ

ಪದ್ಯ ೭೨: ಮಹಾಂಕುಶವು ಯಾರಿಗೆ ಮಣಿಯುತ್ತದೆ?

ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ (ದ್ರೋಣ ಪರ್ವ, ೩ ಸಂಧಿ, ೭೨ ಪದ್ಯ)

ತಾತ್ಪರ್ಯ:
ಭಗದತ್ತನು ಪ್ರಯೋಗಿಸಿದ ಮಹಾಂಕುಶವು ಯಜ್ಞವರಾಹದ ದಾಡೆ, ಅದನ್ನು ನರಕಾಸುರನಿಗೆ ಕೊಟ್ಟೆನು. ಅವನಿಮ್ದ ಇದು ಭಗದತ್ತನಿಗೆ ಬಂದಿತು. ಇದು ನಿಮಿಷಮಾತ್ರದಲ್ಲಿ ಹರ, ಬ್ರಹ್ಮಾದಿಗಳನ್ನು ಗೆಲ್ಲುತ್ತದೆ, ನನಗಲ್ಲದೆ ಇದು ಬೇರಾರಿಗೂ ಬಗ್ಗುವುದಿಲ್ಲ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ವರಾಹ: ಹಂದಿ; ದಾಡೆ: ಹಲ್ಲು; ತ್ರಿದಶ: ದೇವತೆ; ವೈರಿ: ರಿಪು; ಕೊಟ್ಟೆ:ನೀಡು; ಅಸ್ತ್ರ: ಶಸ್ತ್ರ, ಆಯುಧ; ಹರ: ಈಶ್ವರ; ಬ್ರಹ್ಮ: ಅಜ; ಗೆಲುವು: ಜಯ; ನಿಮಿಷ: ಕ್ಷಣ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಉಳಿದ: ಮಿಕ್ಕ; ಭಟರು: ಸೈನಿಕರು; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಇದು +ವರಾಹನ +ದಾಡೆ+ಇದನ್+ಆ
ತ್ರಿದಶವೈರಿಗೆ+ ಕೊಟ್ಟೆನ್+ಅವನಿಂದ್
ಇದುವೆ +ಭಗದತ್ತಂಗೆ +ಬಂದುದು +ವೈಷ್ಣವಾಸ್ತ್ರವಿದು
ಇದು +ಹರ+ಬ್ರಹ್ಮಾದಿಗಳ+ ಗೆಲು
ವುದು +ಕಣಾ +ನಿಮಿಷದಲಿ +ತನಗ
ಲ್ಲದೆ +ಮಹಾಂಕುಶವ್+ಉಳಿದ +ಭಟರಿಗೆ +ಮಣಿವುದಲ್ಲೆಂದ

ಅಚ್ಚರಿ:
(೧) ನರಕಾಸುರ ಎಂದು ಕರೆಯಲು – ತ್ರಿದಶವೈರಿ ಪದದ ಬಳಕೆ
(೨) ಮಹಾಂಕುಶದ ಅಸ್ತ್ರ – ವೈಷ್ಣವಾಸ್ತ್ರ

ಪದ್ಯ ೮: ಭಗದತ್ತನ ಆಕ್ರಮಣ ಹೇಗಿತ್ತು?

ಸುರಪ ಕದಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ (ದ್ರೋಣ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಇಂದ್ರನ ವಜ್ರಾಯುಧದ ಪೆಟ್ಟಿಗೆ ಕುಲಪರ್ವತಗಳು ಉರಿಯನ್ನುಗುಳುವುದೋ ಎಂಬಂತೆ, ಸುಪ್ರತೀಕದ ದಂತಗಳು ಅರುಣವರ್ಣದಿಂದ ಕಂಗೊಳಿಸಿದವು. ಭೂಮಿಯನ್ನಳೆದ ತ್ರಿವಿಕ್ರಮನು ಆಕಾಶವನ್ನೆಳೆದಾಗ ಬಹಿರಾವರನವು ಹರಿದು ಇಳಿದ ದೇವಗಂಗೆಯಂತೆ ಅದರ ಕಪೋಲದಲ್ಲಿ ಮದಧಾರೆ ಒಸರುತ್ತಿತ್ತು.

ಅರ್ಥ:
ಸುರಪ: ಇಂದ್ರ; ಕಡಿ: ಕತ್ತರಿಸು; ಕೆರಳು: ಕೋಪಗೊಳ್ಳು; ಕುಲಗಿರಿ: ದೊಡ್ಡ ಬೆಟ್ಟ; ಉರಿ: ಬೆಂಕಿ; ಉಗುಳು: ಹೊರಹಾಕು; ದಾಡೆ: ದವಡೆ, ಒಸಡು; ಅರುಣ: ಕೆಂಪು; ರಶ್ಮಿ: ಕಿರಣ; ಪಸರು: ಹರಡು; ಎಸೆ: ಹೊರಹೊಮ್ಮು; ಇಭ: ಆನೆ; ಪತಿ: ಒಡೆಯ; ಧರಣಿ: ಭೂಮಿ; ಅಳತೆ: ಪರಿಮಾಣ; ಹರಿ: ವಿಷ್ಣು; ನೆಗಹು: ಜಿಗಿ, ಮೇಲೆತ್ತು; ಚರಣ: ಪಾದ; ಅಗ್ರ: ಮುಂಭಾಗ; ಇಳಿ: ಬಾಗು; ಘನ: ಶ್ರೇಷ್ಠ; ನಿರ್ಝರ: ಝರಿ, ಅಬ್ಬಿ; ಮದ: ಮತ್ತು, ಅಮಲು; ಧಾರೆ: ವರ್ಷ; ಮೆರೆ: ಪ್ರಕಾಶಿಸು; ಕರಿ: ಆನೆ; ಕಪೋಲ: ಕೆನ್ನೆ, ಗಲ್ಲ;

ಪದವಿಂಗಡಣೆ:
ಸುರಪ+ ಕಡಿಯಲು +ಕೆರಳಿ +ಕುಲಗಿರಿ
ಉರಿಯನ್+ಉಗುಳುವುದ್+ಎನಲು +ದಾಡೆಗಳ್
ಅರುಣಮಯ +ರಶ್ಮಿಗಳ +ಪಸರದಲ್+ಎಸೆದುದ್+ಇಭಪತಿಯ
ಧರಣಿ +ಅಳತೆಯ +ಹರಿಯ +ನೆಗಹಿನ
ಚರಣದ್+ಅಗ್ರದೊಳ್+ಇಳಿವ +ಘನ +ನಿ
ರ್ಝರದವೊಲು +ಮದಧಾರೆ +ಮೆರೆದುದು +ಕರಿ+ಕಪೋಲದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಪ ಕದಿಯಲು ಕೆರಳಿ ಕುಲಗಿರಿಯುರಿಯನುಗುಳುವುದೆನಲು
(೨) ಉಪಮಾನದ ಪ್ರಯೋಗ – ಧರಣಿಯಳತೆಯ ಹರಿಯ ನೆಗಹಿನಚರಣದಗ್ರದೊಳಿಳಿವ ಘನ ನಿರ್ಝರದವೊಲು

ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು