ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಶಿರ
ನಾಗ ಹಿಂಗಿಸಿ ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಮ ವಜ್ರಕೆ
ಬೇಗಡೆಯ ವಿಧಿಮಾಡಿತೆಂದನು ಮುನಿ ನೃಪಾಲಂಗೆ (ಅರಣ್ಯ ಪರ್ವ, ೨೪ ಸಂಧಿ, ೫೨ ಪದ್ಯ)
ತಾತ್ಪರ್ಯ:
ಸಾಗರದ ತೆರೆಗಳ ಮೇಲೆ ಬೆಟ್ಟವನ್ನೊಟ್ಟಿ ಸೈನ್ಯವನ್ನು ನಡೆಸಿ ಹತ್ತು ತಲೆಗಳ ರಾವಣನನ್ನು ಸಂಹರಿಸಿ ಪತ್ನಿಯನ್ನು ಬಿಡಿಸಿದ. ಅವನ ಕಷ್ಟವನ್ನು ಈಗಿನ ಮನುಷ್ಯರು ಸಹಿಸಬಲ್ಲರೇ? ರಘುರಾಮನೆಂಬ ವಜ್ರಕ್ಕೆ ವಿಧಿಯು ರಂಧ್ರವನ್ನು ಕೊರೆದು ಬಿಟ್ಟಿತು.
ಅರ್ಥ:
ಸಾಗರ: ಸಮುದ್ರ; ತೆರೆ: ಅಲೆ, ತರಂಗ; ಗಿರಿ: ಬೆಟ್ಟ; ತೂಗು: ಅಲ್ಲಾಡಿಸು; ಸೇನೆ: ಸೈನ್ಯ; ನಡೆಸು: ಮುನ್ನುಗ್ಗು; ದಶಶಿರ: ಹತ್ತು ತಲೆ; ಹಿಂಗಿಸು: ನಿವಾರಿಸು, ಹೋಗಲಾಡಿಸು; ರಮಣಿ: ಪ್ರಿಯತಮೆ; ಬಿಡಿಸು: ವಿಮೋಚಿಸು; ಆಯಸ: ಬಳಲಿಕೆ, ಶ್ರಮ; ನರ: ಮನುಷ್ಯ; ಗರುವ: ಹಿರಿಯ, ಶ್ರೇಷ್ಠ; ವಜ್ರ: ಗಟ್ಟಿಯಾದ; ಬೇಗಡೆ: ಅಲಂಕಾರಕ್ಕಾಗಿ ಬಳಸುವ ಹೊಳಪಿನ ತಗಡು; ವಿಧಿ: ಬ್ರಹ್ಮ; ಮುನಿ: ಋಷಿ; ನೃಪಾಲ: ರಾಜ;
ಪದವಿಂಗಡಣೆ:
ಸಾಗರದ +ತೆರೆಗಳಲಿ +ಗಿರಿಗಳ
ತೂಗಿ +ಸೇನೆಯ +ನಡೆಸಿ +ದಶಶಿರ
ನಾಗ +ಹಿಂಗಿಸಿ +ರಾಮ +ರಮಣಿಯ +ಬಿಡಿಸಿದ್+ಆಯಸವ
ಈಗಳ್+ಈ+ ನರರ್+ಏನನಾನುವರ್
ಆ+ ಗರುವ+ ರಘುರಾಮ +ವಜ್ರಕೆ
ಬೇಗಡೆಯ +ವಿಧಿಮಾಡಿತೆಂದನು +ಮುನಿ +ನೃಪಾಲಂಗೆ
ಅಚ್ಚರಿ:
(೧) ರಾಮನ ಹಿರೆಮೆಯನ್ನು ಹೇಳುವ ಪರಿ – ಗರುವ ರಘುರಾಮ ವಜ್ರಕೆ ಬೇಗಡೆಯ ವಿಧಿಮಾಡಿತೆಂದನು