ಕರೆಸಿದನು ಧೃತರಾಷ್ಟ್ರನವನೀ
ಸುರರ ಬೆಸಗೊಂಡನು ಕುಮಾರನ
ದರುಶನದ ಸಮನಂತರದಲುತ್ಪಾತ ಫಲಗತಿಯ
ಭರತ ವಂಶವನುಳಿದ ಭೂಮೀ
ಶ್ವರರನಂತವನೀತನೇ ಸಂ
ಹರಿಸುವನು ಸಂದೇಹವಿದಕೇನೆಂದರಾ ದ್ವಿಜರು (ಆದಿ ಪರ್ವ, ೪ ಸಂಧಿ, ೫೧ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು ಬ್ರಾಹ್ಮಣರನ್ನು ಕರೆಸಿ, ತನ್ನ ಮಗನ ಮುಖದರ್ಶನಾನಂತರ ಕಾಣಿಸಿಕೊಂಡ ಅಪಶಕುನಗಳ ಫಲವೇನೆಂದು ಕೇಳಿದನು ಬ್ರಾಹ್ಮಣರು ಭರತವಂಶವನ್ನು ಉಳಿದ ಕ್ಷತ್ರಿಯರನ್ನೂ ಈತನೇ ಕೊಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದರು.
ಅರ್ಥ:
ಕರೆಸು: ಬರೆಮಾಡು; ಅವನೀಸುರರು: ಬ್ರಾಹ್ಮಣರು; ಬೆಸಸು: ಹೇಳು; ಕುಮಾರ: ಮಗ; ದರುಶನ: ನೋಟ; ನಂತರ: ಆಮೇಲೆ; ಉತ್ಪಾತ: ಅಪಶಕುನ; ಫಲ: ಪ್ರಯೋಜನ; ವಂಶ: ಕುಲ; ಉಳಿದ: ಮಿಕ್ಕ; ಭೂಮೀಶ್ವರ: ರಾಜ; ಸಂಹರಿಸು: ನಾಶಮಾಡು; ಸಂದೇಹ: ಅನುಮಾನ; ದ್ವಿಜ: ಬ್ರಾಹ್ಮಣ; ಅಂತ: ಕೊನೆ;
ಪದವಿಂಗಡಣೆ:
ಕರೆಸಿದನು +ಧೃತರಾಷ್ಟ್ರನ್+ಅವನೀ
ಸುರರ +ಬೆಸಗೊಂಡನು +ಕುಮಾರನ
ದರುಶನದ +ಸಮನಂತರದಲ್+ಉತ್ಪಾತ +ಫಲಗತಿಯ
ಭರತ +ವಂಶವನ್+ಉಳಿದ +ಭೂಮೀ
ಶ್ವರರನ್+ಅಂತವನ್+ಈತನೇ +ಸಂ
ಹರಿಸುವನು +ಸಂದೇಹವಿದಕೇನ್+ಎಂದರಾ+ ದ್ವಿಜರು
ಅಚ್ಚರಿ:
(೧) ಅವನೀಸುರ, ದ್ವಿಜ – ಸಮಾನಾರ್ಥಕ ಪದ