ಮುರನ ನರಕನ ಹಂಸಡಿಬಿಕರ
ವರಸೃಗಾಲದ ದಂತವಕ್ತ್ರನ
ದುರುಳ ಪೌಂಡ್ರಕ ಪಂಚಜನ ಕುಂಭನ ನಿಕುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ (ಸಭಾ ಪರ್ವ, ೧೦ ಸಂಧಿ, ೫೯ ಪದ್ಯ)
ತಾತ್ಪರ್ಯ:
ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ ಮೊದಲಾದ ದುಷ್ಟ ದೈತ್ಯರನ್ನು ಯುದ್ಧದಲ್ಲಿ ಸಂಹರಿಸಿದನು. ಅವರಿಗೆ ನೀನು ಯಾವ ರೀತಿಯಲ್ಲೂ ಸಮನಲ್ಲ. ಇವನನ್ನು ಹಿಂದೆ ಕೆಣಕಿದವರು ನಿನಗಿಂತ ಬಲಶಾಲಿಗಳೆಂದು ಭೀಷ್ಮರು ಹೇಳಿದರು.
ಅರ್ಥ:
ದುರುಳ: ದುಷ್ಟ; ಅರಿ: ವೈರಿ; ಒರಸು: ಸಾರಿಸು, ನಾಶಮಾಡು, ಅಳಿಸು; ಪಾಡು: ಸ್ಥಿತಿ, ಅವಸ್ಥೆ; ದೈತ್ಯ: ರಾಕ್ಷಸ; ಕೆಣಕು: ರೇಗಿಸು;
ಪದವಿಂಗಡಣೆ:
ಮುರನ+ ನರಕನ+ ಹಂಸ+ಡಿಬಿಕರ
ವರಸೃಗಾಲದ +ದಂತವಕ್ತ್ರನ
ದುರುಳ +ಪೌಂಡ್ರಕ +ಪಂಚಜನ +ಕುಂಭನ +ನಿಕುಂಭಕನ
ಅರಿ +ಹಯಗ್ರೀವಕನ +ಸಾಲ್ವನನ್
ಒರಸಿದನಲಾ +ನಿನ್ನ +ಪಾಡಿನ
ದುರುಳರೇ +ದೈತ್ಯೇಂದ್ರರ್+ಈತನ +ಕೆಣಕಿದವರೆಂದ
ಅಚ್ಚರಿ:
(೧) ರಾಕ್ಷಸರ ಹೆಸರು – ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ