ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ (ದ್ರೋಣ ಪರ್ವ, ೩ ಸಂಧಿ, ೫೫ ಪದ್ಯ)
ತಾತ್ಪರ್ಯ:
ಅರ್ಜುನನು ಅವಿಷ್ಟೂ ಬಾಣಗಳನ್ನು ತುಂಡುಮಾಡಿ ಭಗದತ್ತನ ಬಿಲ್ಲನ್ನು ತುಂಡು ಮಾಡಿದನು. ಭಗದತ್ತ ಕಂಗನೆ ಕೆರಳಿ ಮುಸುಕಿನಲ್ಲಿಟ್ಟಿದ್ದ ತನ್ನ ಆಯುಧವೊಂದನ್ನು ತೆಗೆದನು. ಆ ಮಹಾ ಅಂಕುಶದ ಮೊನೆಯಿಂದ ಸೂರ್ಯಕೋಟಿ ಪ್ರಕಾಶವು ಹೊರ ಹೊಮ್ಮುತ್ತಿತ್ತು. ಸುತ್ತಲೂ ಉರಿಯ ತೆಕ್ಕೆಗಳೇಳುತ್ತಿದ್ದವು.
ಅರ್ಥ:
ಅನಿತು: ಸ್ವಲ್ಪ; ಶರ: ಬಾಣ; ಕಡಿ: ಕತ್ತರಿಸು; ಧನು: ಬಿಲ್ಲು; ಇಕ್ಕಡಿ; ಕಂಗನೆ: ಅಧಿಕವಾಗಿ; ಕನಲು: ಬೆಂಕಿ, ಉರಿ; ಗವಸಣಿಗೆ: ಮುಸುಕು; ಉಗಿ: ಹೊರಹಾಕು; ಆಯುಧ: ಶಸ್ತ್ರ; ದಿನಪ: ರವಿ; ಕೋಟಿ: ಅಸಂಖ್ಯಾತ; ರಶ್ಮಿ: ಕಿರಣ; ತುದಿ: ಕೊನೆ; ಮೊನೆ: ಹರಿತವಾದ; ಧಾರೆ: ವರ್ಷ; ತನಿ: ಹೆಚ್ಚಾಗು; ತೆಕ್ಕೆ: ಗುಂಪು; ಥಳಥಳಿ: ಹೊಳೆ; ಅಂಕುಶ:ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ;
ಪದವಿಂಗಡಣೆ:
ಅನಿತು +ಶರವನು+ ಕಡಿದು +ಭಗದ
ತ್ತನ+ ಧನುವನ್+ಇಕ್ಕಡಿ+ಕಡಿಯೆ +ಕಂ
ಗನೆ +ಕನಲಿ +ಗವಸಣಿಗೆಯಿಂದ್+ಉಗಿದನು +ನಿಜಾಯುಧವ
ದಿನಪ +ಕೋಟಿಯ +ರಶ್ಮಿಯನು +ತುದಿ
ಮೊನೆಯೊಳ್+ಉಗುಳುವ +ಬಾಯಿ +ಧಾರೆಯ
ತನಿ+ಉರಿಯ +ತೆಕ್ಕೆಯಲಿ +ಥಳಥಳಿಸುವ+ ಮಹಾಂಕುಶವ
ಅಚ್ಚರಿ:
(೧) ಆಯುಧದ ಪ್ರಕಾಶ – ದಿನಪ ಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ ಬಾಯಿ