ಆಹಹ ಬೆಂದುದು ಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತಂದರೈ ತ್ರೈಜಗಕೆ ತಲ್ಲಣವ
ರಹವಿದೇನೆಂದಭ್ರ ತಳದಿಂ
ಮಹಿಗೆ ಬಂದನು ದೇವಮುನಿ
ದುಸ್ಸಹವಿದೇನೈ ಪಾರ್ಥ ಹೋಹೋ ಸಾಕು ಸಾಕೆಂದ (ಅರಣ್ಯ ಪರ್ವ, ೧೪ ಸಂಧಿ, ೮ ಪದ್ಯ)
ತಾತ್ಪರ್ಯ:
ಓಹೋ ಇದೇನು ಭೂಮಿಯು ಬೆಂದಂತಾಗುತ್ತಿದೆ, ಇದೇನು ಯುದ್ಧದ ಸಮಯವೇನಲ್ಲ, ತಮ್ಮ ವಿನೋದಕ್ಕಾಗಿ ಯಾರೋ ಬುದ್ಧಿಯಿಲ್ಲದವರು ಲೋಕಕ್ಕೆ ಕ್ಷೋಭೆಯನ್ನುಂಟು ಮಾಡುತ್ತಿದ್ದಾರೆ, ಇದನ್ನು ತಪ್ಪಿಸುವ ಮಾರ್ಗವೇನೆಂದು ಯೋಚಿಸುತ್ತಾ ನಾರದರು ಆಗಸದಿಂದ ಭೂಮಿಗೆ ಇಳಿದು ಬಂದು ಅರ್ಜುನನನ್ನು ನೋಡಿ ಓಹೋ ಅರ್ಜುನ ಇದು ಸಹಿಸಲಾಗದ ಸಂಕಟ ಇದನ್ನು ಸಾಕು ಮಾಡೆಂದನು.
ಅರ್ಥ:
ಆಹಹ: ಓಹೋ; ಬೆಂದು: ಸುಟ್ಟುಹೋಗು; ಭುವನ: ಭೂಮಿ; ವಿಗ್ರಹ: ರೂಪ; ಯುದ್ಧ; ಸಮಯ: ಕಾಲ; ಲೀಲೆ: ಆಟ, ಕ್ರೀಡೆ; ಕುಹಕ: ಮೋಸ, ವಂಚನೆ; ಮತಿ: ಬುದ್ಧಿ; ತಂದರೈ: ತರು, ಬರೆಮಾಡು; ತ್ರೈಜಗ: ಮೂರು ಲೋಕ; ತಲ್ಲಣ: ಅಂಜಿಕೆ, ಭಯ; ರಹ: ಗುಟ್ಟು, ರಹಸ್ಯ; ಅಭ್ರ: ಆಗಸ; ತಳ: ಕೆಳಗು, ಪಾತಾಳ; ಮಹಿ: ಭೂಮಿ; ಬಂದನು: ಆಗಮಿಸು; ದೇವಮುನಿ: ನಾರದ; ದುಸ್ಸಹ: ಸಹಿಸಲಸಾಧ್ಯವಾದ; ಸಾಕು: ನಿಲ್ಲಿಸು;
ಪದವಿಂಗಡಣೆ:
ಅಹಹ +ಬೆಂದುದು +ಭುವನವ್+ಇದು +ವಿ
ಗ್ರಹದ +ಸಮಯವೆ +ತಮ್ಮ +ಲೀಲೆಗೆ
ಕುಹಕ+ಮತಿಗಳು+ ತಂದರೈ +ತ್ರೈಜಗಕೆ+ ತಲ್ಲಣವ
ರಹವಿದೇನ್+ಎಂದ್+ಅಭ್ರ+ ತಳದಿಂ
ಮಹಿಗೆ+ ಬಂದನು +ದೇವಮುನಿ
ದುಸ್ಸಹವಿದೇನೈ+ ಪಾರ್ಥ +ಹೋಹೋ +ಸಾಕು +ಸಾಕೆಂದ
ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಂದರೈ ತ್ರೈಜಗಕೆ ತಲ್ಲಣವ
(೨) ಹೋಹೋ, ಆಹಹ – ಆಶ್ಚರ್ಯ ಸೂಚಕ ಪದಗಳ ಬಳಕೆ