ಪದ್ಯ ೩೩: ಹನುಮನು ಯುಗದ ಗುಣಧರ್ಮದ ಬಗ್ಗೆ ಏನು ಹೇಳಿದನು?

ಈ ಯುಗದ ಗುಣಧರ್ಮವಾ ತ್ತೇ
ತಾಯುಗದವರಿಗಿಅದದಾ ತ್ರೇ
ತಾಯುಗವು ಸರಿಯಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮರ್ಥ್ಯವಾತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಕೋರಿಕೆಯನ್ನು ಕೇಳಿ, ಈ ದ್ವಾಪರ ಯುಗದ ಗುಣಧರ್ಮಗಳು ತ್ರೇತಾಯುಗದ ಗುಣಧರ್ಮಗಳಿಗೆ ಸಮನಲ್ಲ. ಕೃತಯುಗದ ಒಂದು ಪಾದದ ಗುಣ ಧರ್ಮಗಳು ತ್ರೇತಾಯುಗದವರಲ್ಲಿ ಕಡಿಮೆ, ಆಯಾ ಯುಗದ ಮನುಷ್ಯರ ಸತ್ವ, ಆಯಸ್ಸು, ಸಾಮರ್ಥ್ಯಗಳು ಮುಂದಿನ ಯುಗದವರಲ್ಲಿರುವುದಿಲ್ಲ ಎಂದು ಯುಗಗಳ ಗುಣಧರ್ಮದ ಬಗ್ಗೆ ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಗುಣ: ನಡತೆ, ಸ್ವಭಾವ; ಧರ್ಮ: ಧಾರಣೆ ಮಾಡಿದುದು; ಐದೆ: ವಿಶೇಷವಾಗಿ; ದೇಶ: ರಾಷ್ಟ್ರ; ಮನುಜ: ಮನುಷ್ಯ; ಸತ್ವ: ಶಕ್ತಿ, ಬಲ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ತರುವಾಯ: ರೀತಿ, ಕ್ರಮ; ಸಲ್ಲು: ನೆರವೇರು; ನಗುತ: ಸಂತಸ;

ಪದವಿಂಗಡಣೆ:
ಈ +ಯುಗದ +ಗುಣಧರ್ಮವಾ+ ತ್ರೇ
ತಾ+ಯುಗದವರಿಗ್+ಐದದ್+ಆ+ ತ್ರೇ
ತಾ+ಯುಗವು+ ಸರಿಯಲ್ಲ+ ಕೃತ+ಯುಗದೇಕ+ ದೇಶದಲಿ
ಆ +ಯುಗದಲಾ +ಮನುಜರಾ +ಸತ್ವ
ಆಯುವ್+ಆ+ ಸಾಮರ್ಥ್ಯವ್+ಆ+ತರು
ವಾಯ +ಯುಗದಲಿ+ ಸಲ್ಲದೆಂದನು +ನಗುತ +ಹನುಮಂತ

ಅಚ್ಚರಿ:
(೧) ಯುಗ – ೧-೪ ಸಾಲಿನ ೨ ಪದವಾಗಿ ಬಳಕೆ
(೨) ೧-೨ ಸಾಲಿನ ಕೊನೆ ಪದ ತ್ರೇ ಆಗಿರುವುದು