ಏನು ಕುಂತೀಸುತನಪಾಯವ
ದೇನು ಫಣಿ ಬಂಧದ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವಶಿವಯೆನುತ ನುಡಿಸಿದನನಿಲ ನಂದನನ (ಅರಣ್ಯ ಪರ್ವ, ೧೪ ಸಂಧಿ, ೩೯ ಪದ್ಯ)
ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ, ಏನು ಭೀಮ ಇದೇನು ಅಪಾಯಕ್ಕೆ ಸಿಲುಕಿದೆ, ಹಾವಿನ ಹಿಡಿತದಲ್ಲಿ ವಿನೋದದಿಂದ ಸಿಕ್ಕಿದೆಯೋ, ಮನುಷ್ಯರ ಬಲವನ್ನಡಗಿಸುವ ವಿಧಿಯ ಲೀಲೆಯೋ? ನಮಗಿಂತಹ ಹೀನದೆಸೆ ಬರಲು ಕಾರಣವೇನು? ಯಾವ ಪಾಪದಿಂದ ನಿನಗೀ ಗತಿಯು ಬಂದಿತು ಎಂದು ಭೀಮನನ್ನು ಕೇಳಿದನು.
ಅರ್ಥ:
ಸುತ: ಮಗ; ಅಪಾಯ: ತೊಂದರೆ; ಫಣಿ: ಹಾವು; ಬಂಧ: ಕಟ್ಟು, ಪಾಶ; ವಿಧಾನ: ರೀತಿ; ವಿನೋದ: ಸಂತಸ; ತ್ರಾಣಾಪಚಯ: ಶಕ್ತಿಕುಂದುವಿಕೆ; ವಿಧಿ: ನಿಯಮ; ಕರ್ತವ್ಯ: ಕಾಯಕ, ಕೆಲಸ; ಹೀನ: ಅಲ್ಪ, ಕ್ಷುದ್ರ; ದೆಸೆ: ಸ್ಥಿತಿ; ನಿಮಿತ್ತ: ನೆಪ, ಕಾರಣ; ದುಷ್ಕೃತ: ಕೆಟ್ಟ ಕೆಲಸ; ನುಡಿಸು: ಮಾತಾಡಿಸು; ಅನಿಲನಂದನ: ವಾಯುಪುತ್ರ (ಭೀಮ);
ಪದವಿಂಗಡಣೆ:
ಏನು +ಕುಂತೀಸುತನ್+ಅಪಾಯವದ್
ಏನು+ ಫಣಿ +ಬಂಧದ +ವಿಧಾನವ್
ಇದೇನು +ನಿನಗೆ +ವಿನೋದವೋ +ತ್ರಾಣಾಪಚಯ+ ವಿಧಿಯೊ
ಏನಿದಕೆ+ ಕರ್ತವ್ಯ +ನಮಗೀ
ಹೀನ +ದೆಸೆಗೆ +ನಿಮಿತ್ತ +ದುಷ್ಕೃತ
ವೇನು+ ಶಿವಶಿವಯೆನುತ +ನುಡಿಸಿದನ್+ಅನಿಲನಂದನನ
ಅಚ್ಚರಿ:
(೧) ಕುಂತೀಸುತ, ಅನಿಲನಂದನ – ಭೀಮನನ್ನು ಕರೆದ ಪರಿ
(೨) ಭೀಮನ ಬಲದ ಬಗ್ಗೆ ಹೇಳುವ ಪರಿ – ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ