ಪದ್ಯ ೬೩: ಕೌರವನು ಯಾರನ್ನು ಸೇನಾಧಿಪತಿಯನ್ನಾಗಿ ಮಾಡಿದನು?

ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ (ಗದಾ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೌರವನು ನುಡಿಯುತ್ತಾ, ಅಶ್ವತ್ಥಾಮ, ನೀನು ಸೇನಾಧಿಪತಿ, ಇವರಿಬ್ಬರೂ ನಿನ್ನ ಸೇನೆ. ನೀವಿನ್ನು ಯುದ್ಧ ಮಾಡಿರಿ ಎಂದು ಅಪ್ಪಣೆ ಕೊಟ್ಟನು. ಅವರು ಮೂವರೂ ಕೌರವನನ್ನು ಬೀಳುಕೊಂಡು ಸೂತರು ತೋರಿಸಿದಂತೆ ರಥವನ್ನೇರಿದರು.

ಅರ್ಥ:
ವರ: ಶ್ರೇಷ್ಠ; ಚಮೂಪತಿ: ಸೇನಾಧಿಪತಿ; ಬಳಿಕ: ನಂತರ; ಚಮು: ಸೇನೆ; ವಿಸ್ತಾರ: ಹರಡು; ರಚಿಸು: ನಿರ್ಮಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತ್ರಯ: ಮೂರು; ನೇಮಿಸು: ಅಪ್ಪಣೆ ಮಾಡು; ಗುರುಜ: ಗುರುವಿನ ಪುತ್ರ (ಅಶ್ವತ್ಥಾಮ); ನರೇಂದ್ರ: ರಾಜ; ಬೀಳುಕೊಂಡು: ತೆರಳು; ಕರೆದು: ಬರೆಮಾದು; ಸೂತ: ಸಾರಥಿ; ಸನ್ನೆ: ಗುರುತು; ಬಂದು: ಆಗಮಿಸು; ಏರು: ಮೇಲೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ವರ +ಚಮೂಪತಿ+ ನೀನು +ಬಳಿಕ್
ಇಬ್ಬರು+ ಚಮೂ+ವಿಸ್ತಾರವ್+ಎನೆ +ವಿ
ಸ್ತರಿಸಿ+ ರಚಿಸುವುದೆಂದು +ರಥಿಕ+ತ್ರಯಕೆ+ ನೇಮಿಸಿದ
ಗುರುಜ +ಕೃಪ +ಕೃತವರ್ಮರ್+ಈ+ ಮೂ
ವರು +ನರೇಂದ್ರನ+ ಬೀಳುಕೊಂಡರು
ಕರೆದು +ಸೂತರ+ ಸನ್ನೆಯಲಿ +ಬಂದೇರಿದರು +ರಥವ

ಅಚ್ಚರಿ:
(೧) ಚಮೂಪತಿ, ಚಮೂವಿಸ್ತಾರ – ಪದಗಳ ಬಳಕೆ
(೨) ಇಬ್ಬರು, ಮೂವರು – ೨, ೫ ಸಾಲಿನ ಮೊದಲ ಪದ