ಪದ್ಯ ೬೦: ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಹೇಗೆ ಎದುರಿಸಿತು?

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತಭೈರವನ (ದ್ರೋಣ ಪರ್ವ, ೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಆವರಿಸಿತು. ಆನೆ, ಕುದುರೆ, ರಥ, ಕಾಲಾಳುಗಳು ಮುನ್ನುಗ್ಗಿದರು. ಶಸ್ತ್ರಗಳ ಮಳೆ ಸುರಿಸಿದರು. ಚಮೂಪತಿಗಳ ಸನ್ನೆಯಂತೆ ಶತ್ರುಗಳಿಗೆ ಕಲ್ಪಾಂತ ಭೈರವನಂತಿದ್ದ ಅಭಿಮನುವನ್ನು ಎದುರಿಸಿದರು.

ಅರ್ಥ:
ಕುಮಾರ: ಮಗ; ಸೇನೆ: ಸೈನ್ಯ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ನೂಕು: ತಳ್ಳು; ಉರವಣೆ: ಆತುರ, ಅವಸರ; ತುರಗ: ಅಶ್ವ; ಆನೀಕ; ಸೈನ್ಯ, ಸಮೂಹ; ಇಭ; ಆನೆ; ತತಿ: ಗುಂಪು; ತೂಳು: ಆವೇಶ, ಉನ್ಮಾದ; ತುಡುಕು: ಹೋರಾಡು, ಸೆಣಸು; ರಥ:ಬಂಡಿ, ತೇರು; ನಿಕರ: ಗುಂಪು; ತೋಕು: ಎಸೆ, ಪ್ರಯೋಗಿಸು; ಕೈದು: ಆಯುಧ; ಮಳೆ: ವರ್ಷ; ರಣ: ಯುದ್ಧ; ಆಕೆವಾಳ: ವೀರ, ಪರಾಕ್ರಮಿ; ಸನ್ನೆ: ಗುರುತು; ಸಮರ: ಯುದ್ಧ; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಯುಗದ ಅಂತ್ಯ; ಭೈರವ: ಈಶ್ವರನ ಸ್ವರೂಪ;

ಪದವಿಂಗಡಣೆ:
ಆ +ಕುಮಾರನ +ಸೇನೆ +ಗಡಣಿಸಿ
ನೂಕಿತ್+ಉರವಣಿಸಿದುದು +ತುರಗ
ಆನೀಕವ್+ಇಭ+ತತಿ +ತೂಳಿದವು +ತುಡುಕಿದವು +ರಥನಿಕರ
ತೋಕಿದವು +ಕೈದುಗಳ +ಮಳೆ +ರಣದ್
ಆಕೆವಾಳರ +ಸನ್ನೆಯಲಿ +ಸಮ
ರಾಕುಳರು +ಕೆಣಕಿದರು +ರಿಪು+ಕಲ್ಪಾಂತ+ಭೈರವನ

ಅಚ್ಚರಿ:
(೧) ತೂಳಿದವು, ತುಡುಕಿದವು, ತೋಕಿದವು – ಪದಗಳ ಬಳಕೆ
(೨) ರಣ, ಸಮರ; ತತಿ, ನಿಕರ – ಸಮಾನಾರ್ಥಕ ಪದ