ಪದ್ಯ ೩೨: ಸಭಾಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಆ ಮಹಾಸಭೆ ದೇವ ನಿರ್ಮಿತ
ರಾಮಣೀಯಕ ವಿವಿಧ ರತ್ನ
ಸ್ತೋಮ ತೇಜಃ ಪುಂಜಭಂಜಿತ ನಯನ ವೀಧಿಯಲಿ
ಸಾಮದಲಿ ನಮ್ಮನು ಯುಧಿಷ್ಠಿರ
ಭೂಮಿಪತಿ ಕರೆಸಿದನು ತನ್ನು
ದ್ಧಾಮ ವಿಭವವನೆನಗೆ ತೋರಲು ತತ್ಸಭಾಸ್ಥಳಕೆ (ಸಭಾ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆ ಸಭಾಸ್ಥಾನವಾದರೋ ದೇವತೆಗಳು ನಿರ್ಮಿಸಿದ ವಿವಿಧ ರತ್ನಗಳ ತೇಜಸ್ಸಿನಿಂದ ರಮಣೀಯವಾಗಿ, ಕಣ್ಣನ್ನು ಕೋರೈಸುತ್ತಿತ್ತು. ತನ್ನ ಅನುಪಮ ವೈಭವವನ್ನು ನನಗೆ ಪ್ರದರ್ಶಿಸಲು ಯುಧಿಷ್ಠಿರನು ನನ್ನನ್ನು ಆ ಸಭಾಸ್ಥಾನಕ್ಕೆ ಕರೆಸಿದನು.

ಅರ್ಥ:
ಮಹಾಸಭೆ: ದೊಡ್ಡ ಓಲಗ; ದೇವ: ಸುರ; ನಿರ್ಮಿತ: ರಚಿಸಿದ; ರಾಮಣೀಯಕ: ಮನೋಹರ, ಸುಂದರ; ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮುತ್ತು; ಸ್ತೋಮ: ಗುಂಪು, ರಾಶಿ; ತೇಜ: ಪ್ರಕಾಶ; ಪುಂಜ: ಗುಂಪು; ಭಂಜಿತ: ಸೋತ, ಹೊಡೆಯಲ್ಪಟ್ಟ; ನಯನ: ಕಣ್ಣು; ವೀಧಿ: ಬೀದಿ, ಮಾರ್ಗ, ದಾರಿ; ಸಾಮ: ಶಾಂತಗೊಳಿಸುವಿಕೆ; ಭೂಮಿಪತಿ: ರಾಜ; ಕರೆಸು: ಬರೆಮಾದು; ಉದ್ಧಾಮ: ದೊಡ್ಡ; ವಿಭವ: ಸಿರಿ, ಸಂಪತ್ತು; ತೋರಲು: ಪ್ರದರ್ಶಿಸು, ವೀಕ್ಷಿಸು; ಸಭೆ: ಓಲಗ; ಸ್ಥಳ: ಜಾಗ;

ಪದವಿಂಗಡಣೆ:
ಆ +ಮಹಾಸಭೆ +ದೇವ +ನಿರ್ಮಿತ
ರಾಮಣೀಯಕ +ವಿವಿಧ +ರತ್ನ
ಸ್ತೋಮ +ತೇಜಃ +ಪುಂಜ+ಭಂಜಿತ +ನಯನ +ವೀಧಿಯಲಿ
ಸಾಮದಲಿ +ನಮ್ಮನು +ಯುಧಿಷ್ಠಿರ
ಭೂಮಿಪತಿ +ಕರೆಸಿದನು +ತನ್
ಉದ್ಧಾಮ +ವಿಭವವನ್+ಎನಗೆ +ತೋರಲು +ತತ್ಸಭಾ+ಸ್ಥಳಕೆ

ಅಚ್ಚರಿ:
(೧) ಕಣ್ಣಿನ ಹಾದಿಯಲಿ ಎಂದು ಹೇಳುವ ಪರಿ – ದೇವ ನಿರ್ಮಿತ ರಾಮಣೀಯಕ ವಿವಿಧ ರತ್ನ ಸ್ತೋಮ ತೇಜಃ ಪುಂಜಭಂಜಿತ ನಯನ ವೀಧಿಯಲಿ