ಪದ್ಯ ೪೨: ದೂರ್ವಾಸ ಮುನಿಗಳು ದಿವ್ಯದೃಷ್ಟಿಯಿಂದ ಯಾರನ್ನು ನೋಡಿದರು?

ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯಾ
ಸರಸಿಜಾಕ್ಷನ ಬರವ ಕಂಡನು ದಿವ್ಯ ದೃಷ್ಟಿಯಲಿ (ಅರಣ್ಯ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಈ ಕಡೆಗೆ ದೂರ್ವಾಸರಿಗೂ ಅವರ ಪರಿವಾರದವರಿಗೂ ಮನಸ್ಸು ಪ್ರಫುಲ್ಲವಾಗಿ ರೋಮಾಂಚನವಾಯಿತು. ತೃಪ್ತಿಯುಂಟಾಯಿತು. ಬಳ್ಳಿ ತೇಗುಗಳು ಬಂದವು. ಹೊಟ್ಟೆಗಳು ಕತ್ತಿನವರೆಗೂ ಅಡರಿದವು. ಆಗ ದೂರ್ವಾಸನು ಇದೇನೆಂದು ಚಕಿತನಾಗಿ ದಿವ್ಯದೃಷ್ಟಿಯಿಂದ ಶ್ರೀಕೃಷ್ಣನು ಬಂದುದನ್ನು ತಿಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಈಚೆ: ಈ ಬದಿ; ಮನ: ಮನಸ್ಸು; ಉಬ್ಬರ: ಅಧಿಕ; ತನು: ದೇಹ; ತಳಿತ: ಚಿಗುರಿದ; ರೋಮ: ಕೂದಲು; ಭರ: ಭಾರ, ಹೊರೆ; ತುಷ್ಟಿ: ತೃಪ್ತಿ, ಆನಂದ; ಬಲಿ: ಗಟ್ಟಿ, ದೃಢ; ತೇಗು: ತಿಂದು ಮುಗಿಸು; ಹಿಗ್ಗು: ಸಂತೋಷ, ಆನಂದ; ಕೊರಳು: ಕತ್ತು; ಅಡರು: ಆಸರೆ; ಹೊಟ್ಟೆ: ಉದರ; ಋಷಿ: ಮುನಿ; ಸಹ: ಜೊತೆ; ಸರಸಿಜಾಕ್ಷ: ಕಮಲದಂತ ಕಣ್ಣು; ಬರವ: ಆಗಮನ; ಕಂಡು: ನೋಡು; ದಿವ್ಯ: ಶ್ರೇಷ್ಠ; ದೃಷ್ಟಿ: ನೋಟ;

ಪದವಿಂಗಡಣೆ:
ಅರಸ +ಕೇಳ್+ಈಚೆಯಲಿ +ಮನದ್
ಉಬ್ಬರದ +ತನುವಿನ +ತಳಿತ +ರೋಮದ
ಭರದ+ ತುಷ್ಟಿಯ +ಬಲಿಯ +ತೇಗುವ +ಹಿಗ್ಗು+ವಳ್ಳೆಗಳ
ಕೊರಳಿಗ್+ಅಡರುವ +ಹೊಟ್ಟೆಗಳ +ಋಷಿ
ವರರು +ಸಹ +ದೂರ್ವಾಸ +ಮುನಿಯಾ
ಸರಸಿಜಾಕ್ಷನ+ ಬರವ+ ಕಂಡನು +ದಿವ್ಯ +ದೃಷ್ಟಿಯಲಿ

ಅಚ್ಚರಿ:
(೧) ಕೃಷ್ಣನನ್ನು ಸರಸಿಜಾಕ್ಷ ಎಂದು ಕರೆದಿರುವುದು
(೨) ಹೊಟ್ಟೆ ತುಂಬಿರುವುದನ್ನು ತಿಳಿಸುವ ಪರಿ – ಮನದುಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ ಕೊರಳಿಗಡರುವ ಹೊಟ್ಟೆಗಳ

ಪದ್ಯ ೧೭: ಬೇಡನು ಭೀಮನಿಗೆ ಏನು ಹೇಳಿದನು?

ಮೇಹುಗಾಡಿನೊಳವರ ಮೈಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟ ತೇಗುವರೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಹುಲು
ಸಾಹಸಕ್ಕಂಜುವೆವು ನೀನೇಳೆಂದನಾ ಶಬರ (ಅರಣ್ಯ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮೇಯುವ ಕಾಡಿನಲ್ಲಿ ಅವುಗಳನ್ನು ಸೋಹಿಕೊಂಡು ಬಂದರೆ ಅವುಗಳು ಗುಂಪುಗುಂಪಾಗಿ ತೆಕ್ಕೆಗೆ ಸಿಗುತ್ತವೆ. ಅವನ್ನು ಹೊಡೆಯಲು ಹೋದರೆ ಅವು ಮರಗಳ ಗುಂಪಿನಲ್ಲಿ ಸೇರಿಕೊಂಡು ಮಾಯವಾಗುತ್ತವೆ. ಹಾಡು ಹೇಳಿ ಆಕರ್ಷಿಸಲು ಹೋದರೆ ಆಗುವುದಿಲ್ಲ, ನಾವಿಟ್ಟಗುರಿ ಹೆಚ್ಚು ಕಡಿಮೆಯಾಗುತ್ತದೆ. ಅವುಗಳ ಕಾಟ ಹೆಚ್ಚಾದರೂ ಸಾಹಸದಿಂದ ಯಾವ ಪ್ರಯೊಜನವೂ ಆಗದು. ಆದುದರಿಂದ ಬೇಟೆಗೆ ನೀನೇ ಬಾ ಎಂದು ಬೇಡನು ಭೀಮನಿಗೆ ಹೇಳಿದನು.

ಅರ್ಥ:
ಮೇಹು: ಮೇಯುವ; ಕಾಡು: ಕಾನನ, ಅರಣ್ಯ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುವ್ವಲೆ, ಸುಬ್ಬಲೆ: ಒಂದು ಬಗೆಯಾದ ಬಲೆ; ತೋಳ: ವೃಕ; ತೆಕ್ಕೆ: ಗುಂಪು; ತೋಟಿ: ಕಲಹ, ಜಗಳ; ತೇಗು: ತಿಂದು ಮುಗಿಸು, ಏಗು; ತೋಹು: ಮರಗಳ ಗುಂಪು, ಸಮೂಹ, ತೋಪು; ತೊದಳು: ಉಗ್ಗು; ಗೋರಿ: ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು; ಗಾಹು: ಮೋಸ, ವಂಚನೆ; ಗುರಿ: ಈಡು, ಲಕ್ಷ್ಯ; ಗಡಬಡಿ: ಆತುರ; ಹುಲು: ಕ್ಷುದ್ರ, ಅಲ್ಪ; ಸಾಹಸ: ಪರಾಕ್ರಮ; ಅಂಜು: ಹೆದರು; ಶಬರ: ಬೇಡ;

ಪದವಿಂಗಡಣೆ:
ಮೇಹುಗಾಡಿನೊಳ್+ಅವರ +ಮೈಮಿಗೆ
ಸೋಹಿದರೆ+ ಸುವ್ವಲೆಯ+ ಸುಬ್ಬಲೆ
ಆಹವದಲೇ+ ತೋಳ+ ತೆಕ್ಕೆಯ +ತೋಟ +ತೇಗುವರೆ
ತೋಹಿನಲಿ+ ತೊದಳಾಗಿ +ಗೋರಿಯ
ಗಾಹಿನಲಿ+ ಗುರಿ+ ಗಡಬಡಿಸೆ+ ಹುಲು
ಸಾಹಸಕ್+ಅಂಜುವೆವು +ನೀನ್+ಏಳೆಂದನಾ+ ಶಬರ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ
(೨) ಗ ಕಾರದ ಸಾಲು ಪದ – ಗೋರಿಯ ಗಾಹಿನಲಿ ಗುರಿ ಗಡಬಡಿಸೆ
(೩) ಸ ಕಾರದ ತ್ರಿವಳಿ ಪದ – ಸೋಹಿದರೆ ಸುವ್ವಲೆಯ ಸುಬ್ಬಲೆಯಾಹವದಲೇ

ಪದ್ಯ ೧೦೬: ಅಂಜನಾಸ್ತ್ರದ ಮಹಿಮೆ ಎಂತಹುದು?

ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು ತಾ
ನೊಂದು ಶರರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ (ಅರಣ್ಯ ಪರ್ವ, ೭ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಪಾರ್ವತಿಯು, ಅರ್ಜುನ ಈ ಅಸ್ತ್ರವು ನಿನ್ನ ಬಳಿಗೆ ಬಂದು ಬಾಣದ ರೂಪದಿಂದ ಕಾಣಿಸಿಕೊಳ್ಳುತ್ತದೆ. ಇದರ ಪ್ರಯೊಗ ಮಾಡಿದರೆ ಒಂದು, ಹತ್ತು ನೂರು, ಸಾವಿರ, ಲಕ್ಷ, ಖೋಟಿ, ಅನಂತ ಶತ್ರುಗಳನ್ನು ನುಂಗಿ ತೇಗುತ್ತದೆ, ಎಂದು ಹೇಳಿ ಮಂತ್ರವನ್ನು ಅರ್ಜುನನಿಗೆ ಉಪದೇಶಿಸಿದಳು.

ಅರ್ಥ:
ದಶ: ಹತ್ತು; ಶತ: ನೂರು; ಸಾವಿರ: ಸಹಸ್ರ; ಹೆಸರು: ನಾಮ; ಅಗಣಿತ: ಲೆಕ್ಕವಿಲ್ಲದ; ರಿಪು: ವೈರಿ; ತೇಗು: ತೇಗುವಿಕೆ, ಢರಕೆ; ಬೆಸಸು: ಹೇಳು, ಆಜ್ಞಾಪಿಸು; ಬೇಡು: ಕೇಳು, ಯಾಚಿಸು, ಬಯಸು; ಶರ: ಬಾಣ; ಮುದ: ಸಂತಸ; ವರ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ;

ಪದವಿಂಗಡಣೆ:
ಒಂದು +ದಶ +ಶತ +ಸಾವಿರದ+ ಹೆಸ
ರಿಂದ +ಲಕ್ಷವು +ಕೋಟಿ+ಅಗಣಿತ
ದಿಂದ +ನಿನಗಾಂತದಟ+ರಿಪುಗಳ +ತಿಂದು +ತೇಗುವುದು
ಬಂದು +ಬೆಸನನು +ಬೇಡುವುದು+ ತಾ
ನೊಂದು +ಶರ+ರೂಪಾಗೆನುತ+ ಮುದ
ದಿಂದ +ವರ +ಮಂತ್ರೋಪದೇಶವನ್+ಇತ್ತಳ್+ಅರ್ಜುನಗೆ

ಅಚ್ಚರಿ:
(೧) ಸಂಖ್ಯೆಯ ಬಳಕೆ – ೧, ೧೦, ೧೦೦, ೧೦೦೦, ೧,೦೦,೦೦೦, ೧,೦೦,೦೦,೦೦೦