ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನಪರಿಯಂತ ಕಂಡುದು ರಾಯ ರಾಣಿಯರ (ಗದಾ ಪರ್ವ, ೧೧ ಸಂಧಿ, ೨೦ ಪದ್ಯ)
ತಾತ್ಪರ್ಯ:
ಈ ರಾಣಿಯರ ರೂಪವನ್ನು ಗಾಳಿ ಬಿಸಿಲುಗಳೇ ಈ ಮೊದಲು ಕಂಡಿರಲಿಲ್ಲ. ಇಂತಹ ಅಪೂರ್ವ ರೂಪವನ್ನ ಆವರಿಸುವೆವು ಎಂದು ಕಡು ಬಿಸಿಲೂ ಬಿರುಗಾಳಿಯೂ ಅವರನ್ನು ಹಿಂಸಿಸಿದವು. ಅವರೆಂದೂ ಕಾಣದ ಜಾಗಕ್ಕೆ ಅವರನ್ನು ದಬ್ಬಿದವು. ಸಮಾಜದ ಸಮಸ್ತರೂ ಅವರನ್ನು ಕಂಡರು.
ಅರ್ಥ:
ಗಾಳಿ: ವಾಯು; ಅರಿ: ತಿಳಿ; ಮುನ್ನ: ಮೊದಲು; ರವಿ: ಸೂರ್ಯ; ಕಿರಣ: ರಶ್ಮಿ, ಬೆಳಕಿನ ಕದಿರು; ಆಳಿ: ಸಾಲು, ಸಮೂಹ; ಸೋಂಕು: ತಾಗು; ಅಪೂರ್ವ: ಹಿಂದೆಂದೂ ಕಾಣದ, ಅಪರೂಪವಾದ; ರೂಪ: ಆಕಾರ, ಚೆಲುವು; ಬೀಳು: ತಗುಲು; ಕಡು: ಬಹಳ; ವಿಸಿಲು: ಬಿಸಿಲು, ತಾಪ; ಬಿರುಗಾಳಿ: ಜೋರಾದ ಗಾಳಿ; ತೂಳು: ಆವೇಶ, ಉನ್ಮಾದ; ತರುಣಿ: ಹೆಣ್ಣು; ನೆಲೆ: ಭೂಮಿ; ಚಾಂಡಾಲ: ದುಷ್ಟ; ಪರಿಯಂತ: ಅಲ್ಲಿಯವರೆಗೂ; ಕಂಡು: ನೋಡು; ರಾಯ: ರಾಜ; ರಾಣಿ: ಅರಸಿ; ಆಲಿ: ಕಣ್ಣು;
ಪದವಿಂಗಡಣೆ:
ಗಾಳಿ+ಅರಿಯದು +ಮುನ್ನ+ ರವಿ+ಕಿರ
ಣಾಳಿ +ಸೋಂಕದ್+ಅಪೂರ್ವ+ರೂಪಿನ
ಮೇಲೆ +ಬೀಳುವವ್+ಎಂಬವೊಲು +ಕಡು+ಬಿಸಿಲು +ಬಿರುಗಾಳಿ
ತೂಳಿದವು +ತರುಣಿಯರನ್+ಆವವರ್
ಆಲಿ + ಅರಿಯದ+ ನೆಲೆಯನ್+ಆ+ ಚಾಂ
ಡಾಲ+ಜನ+ಪರಿಯಂತ +ಕಂಡುದು +ರಾಯ +ರಾಣಿಯರ
ಅಚ್ಚರಿ:
(೧) ಕವಿಯ ಕಲ್ಪನೆಯ ಸೊಬಗು – ಗಾಳಿಯರಿಯದು ಮುನ್ನ ರವಿಕಿರಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು