ಪದ್ಯ ೧೭: ಭೀಮನು ಕೌರವನಿಗೆ ಹೇಗೆ ಉತ್ತರಿಸಿದನು?

ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹುದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ (ಗದಾ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ್ನು ಬಯ್ಯುತ್ತಾ, ಎಲೈ ಕೌರವ, ಶಕುನಿಯಿಂದ ಕಪಟವನ್ನು ಕಲಿತು ಮೋಸದ ವಿಜಯಸಾಧಿಸಿ ಉಬ್ಬಿದಿರಿ. ಆಗ ಮಾಡಿದ್ದ ಶಪಥವನ್ನು ನಾವು ಈಗ ತೀರಿಸಿ ತೋರಿಸುತ್ತಿದ್ದೇವೆ. ದುಶ್ಯಾಸನ ರಕ್ತಪಾನ, ನಿನ್ನ ತಮ್ಮಂದಿರ ವಧೆಗಳನು ಈಗಾಗಲೇ ತೋರಿಸಿರುವೆ ಜಗತ್ತೇ ಅದನ್ನರಿತಿದೆ ಎಂದು ಭೀಮನು ಗರ್ಜಿಸಿದನು.

ಅರ್ಥ:
ಕಲಿಸು: ಹೇಳಿಕೊಡು; ಕಪಟ: ಮೋಸ; ಕೌಳಿಕ: ಕಟುಕ, ಮೋಸ; ಉಬ್ಬು: ಹೆಚ್ಚು; ವಿಸ್ತಾರ: ವಿಶಾಲತೆ; ಆದಿ: ಮುಂತಾದ; ರಕುತ: ನೆತ್ತರು; ಪಾನ: ಕುಡಿ; ಸಹೋದರ: ತಮ್ಮ; ನಿಕರ: ಗುಂಪು; ನಾಶ: ಹಾಳುಮಾಡು; ಅರುಹು: ತಿಳಿವಳಿಕೆ; ಪ್ರಕಟ: ಸ್ಪಷ್ಟವಾದುದು; ಜಗ: ಪ್ರಪಂಚ; ಗದೆ: ಮುದ್ಗರ; ತೂಗು: ಅಲ್ಲಾಡು;

ಪದವಿಂಗಡಣೆ:
ಶಕುನಿ +ಕಲಿಸಿದ +ಕಪಟದಲಿ +ಕೌ
ಳಿಕದಲ್+ಉಬ್ಬಿದಿರ್+ಇದರ +ವಿಸ್ತಾ
ರಕರಲೇ +ನಾವ್+ಇಂದಿನಲಿ +ದುಶ್ಯಾಸನಾದಿಗಳ
ರಕುತಪಾನ+ ಭವತ್+ ಸಹೋದರ
ನಿಕರ+ನಾಶನವ್+ಅರುಹುದೇ +ಸು
ಪ್ರಕಟವಿದು +ಜಗಕೆಂದು +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಿಸಿದ ಕಪಟದಲಿ ಕೌಳಿಕದಲುಬ್ಬಿದಿರಿದರ