ಪದ್ಯ ೨೭: ಪ್ರಾಣವನ್ನು ಸಾಲವಾಗಿ ಯಾರು ತಂದಿದ್ದರು?

ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ (ದ್ರೋಣ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಗೋಪಾಲಕರು ಹಿಡಿಯುವ ಕೋಲುಗಳು, ಈಟಿಗಳನ್ನು ತೂಗುತ್ತಾ ಸೈನಿಕರು ಸಂದಣಿಸಲು ಗಜ, ರಥ, ತುರಗಗಳು ಸಜ್ಜಾದವು. ರಾಜರು ಸಿದ್ಧರಾದರು. ಅವರೆಲ್ಲರೂ ತಮ್ಮ ಪ್ರಾಣಗಳನ್ನು ಭೀಮನಿಂದ ಸಾಲವಾಗಿ ತಂದವರು. ಪದ್ಮವ್ಯೂಹದ ಮುಂಭಾಗದಲ್ಲಿ ಅವರೆಲ್ಲರೂ ಸೇರಿದರು.

ಅರ್ಥ:
ಸಾಲು: ಆವಳಿ; ಗೋವಳ: ದನಗಾಹಿ, ಗೋಪಾಲ; ಕಟ್ಟಿಗೆ: ಕೋಲು; ಕುಂತ: ಈಟಿ, ಭರ್ಜಿ; ತೂಗು: ಅಲ್ಲಾಡಿಸು; ಮಿಗೆ: ಅಧಿಕ; ದುವ್ವಾಳಿ: ತೀವ್ರಗತಿ; ದೆಖ್ಖಾಳ: ಗೊಂದಲ, ಗಲಭೆ; ಗಜ: ಆನೆ; ರಥ: ಬಂಡಿ; ತುರಗ: ಅಶ್ವ; ಸೇನೆ: ಸೈನ್ಯ; ಹೇಳಿಕೆ: ಹೇಳಿದ ಮಾತು; ಕವಿ: ಆವರಿಸು; ನೃಪಾಲ: ರಾಜ; ಹರಣ: ಅಪಹರಿಸುವದು; ಸಾಲಿಗ: ಸಾಲಗಾರ; ಸಂದಣಿ: ಗುಂಪು; ಅಬುಜ: ಕಮಲ; ವ್ಯೂಹ: ಗುಂಪು, ಸಮೂಹ; ಅಗ್ರ: ಮುಂದೆ;

ಪದವಿಂಗಡಣೆ:
ಸಾಲು +ಗೋವಳಿ+ಕಟ್ಟಿಗೆಯ+ ಕುಂ
ತಾಳಿಗಳ+ ತೂಗಾಟ +ಮಿಗೆ +ದು
ವ್ವಾಳಿಗಳ +ದೆಖ್ಖಾಳ +ಗಜ +ರಥ +ತುರಗ +ಸೇನೆಯಲಿ
ಮೇಲೆ +ಹೇಳಿಕೆಯಾಯ್ತು +ಕವಿವ+ ನೃ
ಪಾಲಕರು +ಭೀಮಂಗೆ +ಹರಣದ
ಸಾಲಿಗರು +ಸಂದಣಿಸಿತ್+ಅಬುಜ+ವ್ಯೂಹದ್+ಅಗ್ರದಲಿ

ಅಚ್ಚರಿ:
(೧) ಚತುರಂಗ ಸೇನೆ ಎಂದು ಹೇಳಲು – ಗಜ ರಥ ತುರಗ ಸೇನೆಯಲಿ
(೨) ಭೀಮನ ಪರಾಕ್ರಮವನ್ನು ತೋರಿಸುವ ರೂಪಕ – ನೃಪಾಲಕರು ಭೀಮಂಗೆ ಹರಣದ ಸಾಲಿಗರು