ಸಾಲು ಗೋವಳಿಗಟ್ಟಿಗೆಯ ಕುಂ
ತಾಳಿಗಳ ತೂಗಾಟ ಮಿಗೆ ದು
ವ್ವಾಳಿಗಳ ದೆಖ್ಖಾಳ ಗಜ ರಥ ತುರಗ ಸೇನೆಯಲಿ
ಮೇಲೆ ಹೇಳಿಕೆಯಾಯ್ತು ಕವಿವ ನೃ
ಪಾಲಕರು ಭೀಮಂಗೆ ಹರಣದ
ಸಾಲಿಗರು ಸಂದಣಿಸಿತಬುಜವ್ಯೂಹದಗ್ರದಲಿ (ದ್ರೋಣ ಪರ್ವ, ೧೨ ಸಂಧಿ, ೨೭ ಪದ್ಯ)
ತಾತ್ಪರ್ಯ:
ಗೋಪಾಲಕರು ಹಿಡಿಯುವ ಕೋಲುಗಳು, ಈಟಿಗಳನ್ನು ತೂಗುತ್ತಾ ಸೈನಿಕರು ಸಂದಣಿಸಲು ಗಜ, ರಥ, ತುರಗಗಳು ಸಜ್ಜಾದವು. ರಾಜರು ಸಿದ್ಧರಾದರು. ಅವರೆಲ್ಲರೂ ತಮ್ಮ ಪ್ರಾಣಗಳನ್ನು ಭೀಮನಿಂದ ಸಾಲವಾಗಿ ತಂದವರು. ಪದ್ಮವ್ಯೂಹದ ಮುಂಭಾಗದಲ್ಲಿ ಅವರೆಲ್ಲರೂ ಸೇರಿದರು.
ಅರ್ಥ:
ಸಾಲು: ಆವಳಿ; ಗೋವಳ: ದನಗಾಹಿ, ಗೋಪಾಲ; ಕಟ್ಟಿಗೆ: ಕೋಲು; ಕುಂತ: ಈಟಿ, ಭರ್ಜಿ; ತೂಗು: ಅಲ್ಲಾಡಿಸು; ಮಿಗೆ: ಅಧಿಕ; ದುವ್ವಾಳಿ: ತೀವ್ರಗತಿ; ದೆಖ್ಖಾಳ: ಗೊಂದಲ, ಗಲಭೆ; ಗಜ: ಆನೆ; ರಥ: ಬಂಡಿ; ತುರಗ: ಅಶ್ವ; ಸೇನೆ: ಸೈನ್ಯ; ಹೇಳಿಕೆ: ಹೇಳಿದ ಮಾತು; ಕವಿ: ಆವರಿಸು; ನೃಪಾಲ: ರಾಜ; ಹರಣ: ಅಪಹರಿಸುವದು; ಸಾಲಿಗ: ಸಾಲಗಾರ; ಸಂದಣಿ: ಗುಂಪು; ಅಬುಜ: ಕಮಲ; ವ್ಯೂಹ: ಗುಂಪು, ಸಮೂಹ; ಅಗ್ರ: ಮುಂದೆ;
ಪದವಿಂಗಡಣೆ:
ಸಾಲು +ಗೋವಳಿ+ಕಟ್ಟಿಗೆಯ+ ಕುಂ
ತಾಳಿಗಳ+ ತೂಗಾಟ +ಮಿಗೆ +ದು
ವ್ವಾಳಿಗಳ +ದೆಖ್ಖಾಳ +ಗಜ +ರಥ +ತುರಗ +ಸೇನೆಯಲಿ
ಮೇಲೆ +ಹೇಳಿಕೆಯಾಯ್ತು +ಕವಿವ+ ನೃ
ಪಾಲಕರು +ಭೀಮಂಗೆ +ಹರಣದ
ಸಾಲಿಗರು +ಸಂದಣಿಸಿತ್+ಅಬುಜ+ವ್ಯೂಹದ್+ಅಗ್ರದಲಿ
ಅಚ್ಚರಿ:
(೧) ಚತುರಂಗ ಸೇನೆ ಎಂದು ಹೇಳಲು – ಗಜ ರಥ ತುರಗ ಸೇನೆಯಲಿ
(೨) ಭೀಮನ ಪರಾಕ್ರಮವನ್ನು ತೋರಿಸುವ ರೂಪಕ – ನೃಪಾಲಕರು ಭೀಮಂಗೆ ಹರಣದ ಸಾಲಿಗರು