ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು (ದ್ರೋಣ ಪರ್ವ, ೬ ಸಂಧಿ, ೩೯ ಪದ್ಯ)
ತಾತ್ಪರ್ಯ:
ಕುದುರೆಗಳು ಮೇಲೆ ಬಿದ್ದವು. ಆನೆಗಳು ನುಗ್ಗಿದವು. ಎಡಬಲಗಲಲ್ಲಿ ಶತ್ರುಸಮೂಹ ಮುತ್ತಿತು. ಕಾಲಾಳುಗಳು ಕಠೋರ ಮನಸ್ಸಿನಿಂದ ಖಡ್ಗಗಳನ್ನೆತ್ತಿ ಬಂದರು. ಕೌರವನ ಶ್ರೇಷ್ಠರಾದ ಸೈನ್ಯದ ನಾಯಕರು ತಲೆಯೊತ್ತಿ ಅಭಿಮನ್ಯುವಿನೊಡನೆ ಕಾಳಗಕ್ಕೆ ಬಂದರು.
ಅರ್ಥ:
ತುಡುಕು: ಹೋರಾಡು, ಸೆಣಸು; ತೇಜಿ: ಕುದುರೆ; ವಾಘೆ: ಲಗಾಮು; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ತೂಳು: ಆವೇಶ, ಉನ್ಮಾದ; ದಂತಿ: ಆನೆ; ಎಡಬಲ: ಅಕ್ಕಪಕ್ಕ; ಬವರಿ: ತಿರುಗುವುದು; ಮುತ್ತು: ಆವರಿಸು; ಮತ್ತೆ: ಪುನಃ; ರಿಪು: ವೈರಿ; ನಿಕರ: ಗುಂಪು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಕಾಲಾಳು: ಸೈನಿಕ; ಕರೆ: ಬರೆಮಾಡು; ಖಡುಗ: ಕತ್ತಿ; ಧಾರೆ: ವರ್ಷ; ಅಳವಿ: ಯುದ್ಧ; ಕೆಡಿಸು: ಹಾಳುಮಾಡು; ತಲೆ: ಶಿರ; ಒತ್ತು: ಅಮುಕು; ಭೂಪ: ರಾಜ; ಮೊನೆ: ತುದಿ, ಕೊನೆ; ನಾಯಕ: ಒಡೆಯ;
ಪದವಿಂಗಡಣೆ:
ತುಡುಕಿದವು +ತೇಜಿಗಳು +ವಾಘೆಯ
ಗಡಣದಲಿ +ತೂಳಿದವು +ದಂತಿಗಳ್
ಎಡಬಲದ +ಬವರಿಯಲಿ +ಮುತ್ತಿತು +ಮತ್ತೆ +ರಿಪುನಿಕರ
ಕಡುಮನದ +ಕಾಲಾಳು +ಕರೆದುದು
ಖಡುಗ+ ಧಾರೆಯನೀತನ್+ಅಳವಿಯ
ಕೆಡಿಸಿ +ತಲೆಯೊತ್ತಿದರು+ ಭೂಪನ +ಮೊನೆಯ +ನಾಯಕರು
ಅಚ್ಚರಿ:
(೧) ಕ ಕಾರದ ಸಾಲು ಪದ – ಕಡುಮನದ ಕಾಲಾಳು ಕರೆದುದು ಖಡುಗ
(೨) ತುಡುಕಿದವು, ತೂಳಿದವು – ಪದಗಳ ಬಳಕೆ