ಪದ್ಯ ೮೬: ಭೀಷ್ಮನು ಧರ್ಮರಾಯನ ಬಗ್ಗೆ ಏನು ಹೇಳಿದ?

ತುಟ್ಟಿಸಲಿ ಧನ ಮಾನಗರ್ವದ
ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು
ನೆಟ್ಟನೇ ನಿಶ್ಚಯಿಸಿದುದನೊಡ
ಹುಟ್ಟಿದರು ಮನ್ನಿಸಿದರಲ್ಲದೆ
ಹುಟ್ಟಿ ಹೊಂದಲು ಗತಿಯಹುದೆ ನಿನಗೆಂದನಾ ಭೀಷ್ಮ (ಸಭಾ ಪರ್ವ, ೧೫ ಸಂಧಿ, ೮೬ ಪದ್ಯ)

ತಾತ್ಪರ್ಯ:
ಐಶ್ವರ್ಯವು ದುರ್ಲಭವಾಗಲಿ, ಸ್ವಾಭಿಮಾನದ ಗರ್ವದ ಬೆಟ್ಟ ಪುಡಿ ಪುಡಿಯಾಗಲಿ, ಜೀವವು ದೇಹವನ್ನು ಬಿಟ್ಟು ಹೋಗಲಿ, ನಾನು ಸತ್ಯವನ್ನು ಬಿಡುವುದಿಲ್ಲ ಎಂದು ಯುಧಿಷ್ಠಿರನು ನಿಶ್ಚಯಿಸಿದನು. ಅವನ ತಮ್ಮಂದಿರು ಅನುಮೋದಿಸಿದರು. ಹಾಗಿಲ್ಲದಿದ್ದರೆ ನೀವು ಹುಟ್ಟಿ ಏನನ್ನೂ ಪಡೆಯುತ್ತಿರಲಿಲ್ಲ, ಹೋಗಲು ಯಾವ ಜಾಗವೂ ನಿಮಗಿಲ್ಲ ಎಂದು ಭೀಷ್ಮನು ನುಡಿದನು.

ಅರ್ಥ:
ತುಟ್ಟಿ:ಅಭಾವ, ದುಬಾರಿ; ಧನ: ಐಶ್ವರ್ಯ; ಮಾನ: ಮರ್ಯಾದೆ, ಗೌರವ; ಗರ್ವ: ಅಹಂಕಾರ; ಬೆಟ್ಟ: ಶೈಲ; ಮುರಿ: ಸೀಳು; ಜೀವ: ಪ್ರಾಣ; ಒಡಲು: ದೇಹ; ಬಿಟ್ಟು: ತೊರೆ; ಹಿಂಗು: ಕಾಣದಂತಾಗು; ಬಿಡೆ: ತೊರೆ; ಸತ್ಯ: ನಿಜ; ಸೂನು: ಮಗ; ನೆಟ್ಟು: ದಿಟ್ಟ, ನೆಲೆಗೊಳ್ಳು; ನಿಶ್ಚಯ: ನಿರ್ಧಾರ; ಒಡಹುಟ್ಟು: ಅಣ್ಣ ತಮ್ಮಂದಿರು; ಮನ್ನಿಸು: ಗೌರವಿಸು; ಹುಟ್ಟು: ಜನಿಸು; ಗತಿ: ಅವಸ್ಥೆ;

ಪದವಿಂಗಡಣೆ:
ತುಟ್ಟಿಸಲಿ +ಧನ +ಮಾನಗರ್ವದ
ಬೆಟ್ಟ +ಮುರಿಯಲಿ +ಜೀವ+ಒಡಲನು
ಬಿಟ್ಟು +ಹಿಂಗಲಿ+ ಬಿಡೆನು+ ಸತ್ಯವನೆಂದು +ಯಮಸೂನು
ನೆಟ್ಟನೇ +ನಿಶ್ಚಯಿಸಿದುದನ್+ಒಡ
ಹುಟ್ಟಿದರು +ಮನ್ನಿಸಿದರ್+ಅಲ್ಲದೆ
ಹುಟ್ಟಿ +ಹೊಂದಲು +ಗತಿಯಹುದೆ+ ನಿನಗೆಂದನಾ+ ಭೀಷ್ಮ

ಅಚ್ಚರಿ:
(೧) ಧರ್ಮಜನ ಸತ್ಯನಿಷ್ಠೆ: ತುಟ್ಟಿಸಲಿ ಧನ ಮಾನಗರ್ವದ ಬೆಟ್ಟ ಮುರಿಯಲಿ ಜೀವವೊಡಲನು
ಬಿಟ್ಟು ಹಿಂಗಲಿ ಬಿಡೆನು ಸತ್ಯವನೆಂದು ಯಮಸೂನು