ಪದ್ಯ ೨೬: ಪುರದ ಸ್ತ್ರೀಯರು ಎತ್ತಕಡೆ ನಡೆದರು?

ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತು ಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ (ಗದಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಯರು ದ್ವಾರಕಿಯತ್ತಹೋದರು. ಇತ್ತ ಹಸ್ತಿನಾ ಪುರವನ್ನು ಬಿಟ್ಟು ಬಂದ ಸ್ತ್ರೀ ಸಮುದಾಯವು ಕಲ್ಲು ಮುಳ್ಳುಗಳೊತ್ತುತ್ತಿದ್ದ ದೂರದಾರಿಯನ್ನು ಬಿಸಿಲ ಝಳದಲ್ಲಿ ನಡೆಯುತ್ತಾ ಬರುತ್ತಿತ್ತು. ಅವರ ಹೊಟ್ಟೆಗಳಲ್ಲಿ ಉರಿ ಬಿದ್ದಿತ್ತು. ಎರಡು ಕೆನ್ನೆಗಳೂ ಹರಿದುಹೋದಂತೆ ಕಪ್ಪಾಗಿದ್ದವು. ಅವೈರಳ ಅಶ್ರುಧಾರೆಗಳನ್ನು ಸುರಿಸುತ್ತಾ ಅವರು ರಣರಂಗದತ್ತ ನಡೆದರು.

ಅರ್ಥ:
ತಿರುಗು: ಮರಳು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕಾಂತ: ಹೆಣ್ಣು; ಕೋಟಿ: ಅಸಂಖ್ಯಾತ; ಬಂದು: ಆಗಮಿಸು; ಹರಳು: ಕಲ್ಲಿನ ಚೂರು, ನೊರಜು; ಮುಳ್ಳು: ಮೊನಚಾದುದು; ಗಾಲಿ: ಚಕ್ರ; ದೂರ: ಅಂತರ; ಪಥ: ದಾರಿ; ಉರಿ: ಬೆಂಕಿ; ಜಠರ: ಹೊಟ್ಟೆ; ಬಿಸಿಲು: ಸೂರ್ಯನ ತಾಪ; ಝಳ: ತಾಪ; ಹುರಿ: ಕಾಯಿಸು; ಕದಪು: ಕೆನ್ನೆ; ಸುರಿ: ಹರಿಸು; ನಯನಾಂಬು: ಕಣ್ಣೀರು; ರಾಜನಿತಂಬಿನಿ: ರಾಣಿ; ನಿತಂಬಿನಿ: ಹೆಣ್ಣು; ನಿಕರ: ಗುಂಪು; ನಿತಂಬ: ಸೊಂಟದ ಕೆಳಗಿನ ಹಿಂಭಾಗ, ಕಟಿ ಪ್ರದೇಶ;

ಪದವಿಂಗಡಣೆ:
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರದ +ಕಾಂತಾಕೋಟಿ +ಬಂದುದು
ಹರಳು+ಮುಳ್ಳುಗಳ್+ಒತ್ತು+ ಗಾಲಿನ +ದೂರತರ+ಪಥರ
ಉರಿಯ +ಜಠರದ +ಬಿಸಿಲ +ಝಳದಲಿ
ಹುರಿದ +ಕದಪುಗಳೆರಡು+ ಕಡೆಯಲಿ
ಸುರಿವ +ನಯನಾಂಬುಗಳ +ರಾಜನಿತಂಬೀನೀ+ನಿಕರ

ಅಚ್ಚರಿ:
(೧) ರಾಣಿಯರು ಎಂದು ಹೇಳಲು – ರಾಜನಿತಂಬೀನೀ ಪದ ಬಳಕೆ
(೨) ರಾಣಿಯರ ದುಃಖದ ಸ್ಥಿತಿ – ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ

ಪದ್ಯ ೬೧: ದ್ರೋಣನ ಮನಸ್ಸು ಎತ್ತಕಡೆ ತಿರುಗಿತು?

ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ (ದ್ರೋಣ ಪರ್ವ, ೧೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಮುನಿಗಳು ಹೊರಟು ಹೋದರು. ದ್ರೋಣನ ಬುದ್ಧಿ ಆತ್ಮಜ್ಞಾನದ ಕಡೆಗೆ ತಿರುಗಿತು. ನಿಜವಾದ ಅರಿವಿನ ಬೆಳಕಿಗೆ ಮರವೆಯು ತೆರೆಯನ್ನು ಹಾಕಿತು. ಭೀಮನ ಮಾತು ನಿಜವೋ ಸುಳ್ಳೋ ತಿಳಿಯದು. ಅವನ ಮಾತನ್ನು ನಾನು ನಂಬುವುದಿಲ್ಲ, ಅಶ್ವತ್ಥಾಮನ ಮರಣ ದಿಟವೋ ಸುಳ್ಳೋ ಎಂದು ಧರ್ಮರಾಯನನ್ನು ಕೇಳುತ್ತೇನೆ ಎಂದುಕೊಂಡು ಅವನನ್ನು ಹುಡುಕುತ್ತಾ ಹೊರಟನು.

ಅರ್ಥ:
ತಿರುಗು: ಸಂಚರಿಸು; ಮುನಿ: ಋಷಿ; ನಿಕರ: ಗುಂಫು; ಮರಳು: ಹಿಂದಿರುಗು; ಬುದ್ಧಿ: ಜ್ಞಾನ; ತೆರೆ: ಬಿಚ್ಚುವಿಕೆ; ಹಿಡಿ: ಗ್ರಹಿಸು; ಮರವು: ಜ್ಞಾಪಕವಿಲ್ಲದ ಸ್ಥಿತಿ; ದೀಧಿತಿ: ಹೊಳಪು; ಅರಸ: ರಾಜ; ಬೆಸ: ಕೆಲಸ, ಕಾರ್ಯ; ತನುಜ: ಮಗ; ಮರಣ: ಸಾವು; ಹುಸಿ: ಸುಳ್ಳು; ದಿಟ: ನಿಜ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹುವಿಕೆ; ನಂಬು: ವಿಶ್ವಾಸ; ರಾಯ: ರಾಜ; ಅರಸು: ಹುಡುಕು; ಐತಂದು: ಬಂದು ಸೇರು;

ಪದವಿಂಗಡಣೆ:
ತಿರುಗಿದುದು +ಮುನಿ+ನಿಕರವ್+ಅತ್ತಲು
ಮರಳಿತ್+ಈತನ +ಬುದ್ಧಿ+ಇತ್ತಲು
ತೆರೆಯ +ಹಿಡಿದುದು +ಮರವೆ +ಸಮ್ಯಜ್ಞಾನ+ದೀಧಿತಿಗೆ
ಅರಸನನು +ಬೆಸಗೊಂಬ +ತನುಜನ
ಮರಣ +ಹುಸಿಯೋ +ದಿಟವೊ+ ಭೀಮನ
ಸೊರಹ+ ನಂಬೆನ್+ಎನುತ್ತ +ರಾಯನನ್+ಅರಸುತ್+ಐತಂದ

ಅಚ್ಚರಿ:
(೧) ರಾಯ, ಅರಸು – ಪದಗಳ ಬಳಕೆ
(೨) ಅತ್ತಲು, ಇತ್ತಲು – ಪ್ರಾಸ ಪದಗಳು