ಪದ್ಯ ೧೨೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೮?

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಋಷಿಮುನಿಗಳು ತರ್ಕದಲ್ಲಿ ಪಾಂಡಿತ್ಯಹೊಂದಿದವರು, ಕರ್ಮದಲ್ಲಿ ನಿರತರಾದವರು ಪಂಡಿತರು,
ಮೂಢರಾದ ಮಿಕ್ಕ ಜನರು ವಿಷಯಗಳೆಂಬ ಎರೆಹುಳುಗಳು ಚುಚ್ಚಿದ ಗಾಳಕ್ಕೆ ಬೀಳುವ ಮೀನಿನಂತಿರುವವರು. ನನ್ನವರೆಂಬ ಮೋಹದಿಂದಾದರೂ ನಮ್ಮನ್ನು ರಕ್ಷಿಸಲು ಮುಗಿಬೀಳುವಂತಹ ಕೃಪೆಯನ್ನೇಕೆ ತೋರಿಸುತ್ತಿಲ್ಲ ಕೃಷ್ಣ ಎಂದು ದ್ರೌಪದಿ ಮೊರೆಯಿಟ್ಟಳು.

ಅರ್ಥ:
ಋಷಿ: ಮುನಿ; ತಾರ್ಕಿಕ: ತರ್ಕದಲ್ಲಿ ಪಾಂಡಿತ್ಯಪಡೆದವ; ಕರ್ಮ: ಕಾರ್ಯ; ವ್ಯಸನಿ: ಗೀಳುಳ್ಳವ, ಚಟ; ಕೋವಿದ: ಪಂಡಿತ; ಮಿಕ್ಕ: ಉಳಿದ; ವಿಷಯ: ವಿಚಾರ, ಸಂಗತಿ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಮೀನು: ಮತ್ಸ್ಯ; ಮೂಢ: ತಿಳಿವಳಿಕೆಯಿಲ್ಲದ, ಮೂರ್ಖ; ಮನುಷ್ಯ: ನರ; ಒಸೆ: ಪ್ರೀತಿಸು, ಮೆಚ್ಚು; ಬಗೆ: ಆಲೋಚನೆ, ಯೋಚನೆ; ಬಸಿ: ಸರು, ಸ್ರವಿಸು, ಜಿನುಗು; ಬೀಳು: ಎರಗು; ಕೃಪೆ: ದಯೆ; ತೋರು: ಕಾಣು, ದೃಷ್ಟಿಗೆ ಬೀಳು; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ಋಷಿಗಳ್+ಅತಿ +ತಾರ್ಕಿಕರು+ ಕರ್ಮ
ವ್ಯಸನಿಗಳು +ಕೋವಿದರು+ ಮಿಕ್ಕಿನ
ವಿಷಯದ್+ಎರೆ +ಮೀನುಗಳು +ಮೂಢ +ಮನುಷ್ಯರೆಂಬುವರು
ಒಸೆದು +ನಿನ್ನವರೆಂದು +ಬಗೆವರೆ
ಬಸಿದು +ಬೀಳುವ +ಕೃಪೆಯ+ ನೀ+ ತೋ
ರಿಸೆ+ಇದೇನೈ +ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
(೨) ಕೃಷ್ಣನನ್ನು ಮೊರೆಯಿಡುವ ಪರಿ – ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋರಿಸೆ

ಪದ್ಯ ೩೮: ಗಮಕಿಗಳು ಹೇಗೆ ಪ್ರಶಂಸೆ ಪಡೆಯುತ್ತಿದ್ದರು?

ನುಡಿದು ತಲೆದೂಗಿಸುವ ಮರೆಗ
ನ್ನಡಕೆ ಹಾ ಹಾಯೆನಿಸಿ ಮೆಚ್ಚನು
ಪಡೆದ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
ಕೊಡುವ ಪದ್ಯಕೆ ಸುಪ್ರಮೇಯದ
ಗಡಣಕಬುಜಭವಾದಿ ವಿಭುಗಳು
ಬಿಡಿಸಲರಿದೆನಿಪತುಳ ತಾರ್ಕಿಕ ಜನಗಳೊಪ್ಪಿದರು (ಉದ್ಯೋಗ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಾತನಾಡಿ ಅಹುದುದಹುದೆಂದು ತಲೆದೂಗಿಸಿ ರಹಸ್ಯವಾದ ಕನ್ನಡಕೆ ಹಾ ಹಾ ಎಂದು ಹೇಳಿ ಹೊಗಳಿಕೆಯನ್ನು ಪಡೆದು ವಾಗ್ಮಿಗಳು, ಓದಿ ಹೊಗಳಿಕೆಯನ್ನು ಪಡೆದ ಗಮಕಿಗಳು, ಕೊಡುವ ಪದ್ಯಕೆ ಸರಿಯಾಗಿ ವಿವೇಚಿಸಿ, ಪದಗಳನ್ನು ಕೂಡಿಸಿ ತಾವರೆಯ ಇರುವಿಕೆಯನ್ನು ತೋರುವ ಪ್ರಭು, ಬಿಡಿಸಿ ಅರ್ಥೈಸುವ ತಾರ್ಕಿಕ ಜನಗಳನ್ನು ಸಭೆಯಲ್ಲಿ ಒಪ್ಪಿದರು.

ಅರ್ಥ:
ನುಡಿ: ಮಾತು; ತಲೆ: ಶಿರ; ದೂಗಿಸು: ಅಲ್ಲಾಡಿಸು; ಮರೆಗನ್ನಡ: ರಹಸ್ಯವಾದ ಕನ್ನಡ; ಮೆಚ್ಚು: ಒಲುಮೆ, ಪ್ರೀತಿ; ಪಡೆ: ಸೈನ್ಯ, ಬಲ; ವಾಗ್ಮಿ: ಚೆನ್ನಾಗಿ ಮಾತನಾಡುವವನು; ಓದಿ: ತಿಳಿದು; ಹೊಗಳು: ಪ್ರಶಂಶಿಸು; ಗಮಕಿ: ಪದ್ಯಗಳನ್ನು ಹಾಡುವವರು; ಕೊಡು: ನೀಡು; ಪದ್ಯ: ಕಾವ್ಯ; ಪ್ರಮೇಯ: ವಿವೇಚಿಸಬೇಕಾದ, ಅಳೆಯಬಹುದಾದ; ಗಡಣ:ಕೂಡಿಸುವಿಕೆ; ಅಬುಜ: ತಾವರೆ; ಭವ: ಇರುವಿಕೆ, ಅಸ್ತಿತ್ವ; ವಿಭು:ದೇವರು, ಸರ್ವತ್ರವ್ಯಾಪ್ತ, ರಾಜ, ಪ್ರಭು; ಬಿಡಿಸು: ಕಳಚು, ಸಡಿಲಿಸು; ಅರಿ: ತಿಳಿ; ಅತುಳ: ಬಹಳ; ತಾರ್ಕಿಕ: ತರ್ಕಶಾಸ್ತ್ರವನ್ನು ತಿಳಿದವನು; ಜನ: ಮನುಷ್ಯ; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ನುಡಿದು +ತಲೆದೂಗಿಸುವ+ ಮರೆ+
ಕನ್ನಡಕೆ +ಹಾ +ಹಾಯೆನಿಸಿ +ಮೆಚ್ಚನು
ಪಡೆದ+ ವಾಗ್ಮಿಗಳ್+ಓದಿ+ ಹೊಗಳಿಸಿಕೊಂಬ+ ಗಮಕಿಗಳು
ಕೊಡುವ +ಪದ್ಯಕೆ +ಸುಪ್ರಮೇಯದ
ಗಡಣಕ್+ಅಬುಜ+ಭವಾದಿ +ವಿಭುಗಳು
ಬಿಡಿಸಲ್+ಅರಿದ್+ಎನಿಪ್+ಅತುಳ +ತಾರ್ಕಿಕ +ಜನಗಳ್+ಒಪ್ಪಿದರು

ಅಚ್ಚರಿ:
(೧) ವಾಗ್ಮಿ, ಗಮಕಿ, ವಿಭು, ತಾರ್ಕಿಕ – ಜನಗಳ ಬಳಕೆ