ಪದ್ಯ ೩೩: ಆಸ್ಥಾನವು ಹೇಗೆ ಕಂಗೊಳಿಸುತ್ತಿತ್ತು?

ಹರಹಿನಲಿ ಹಿರಿದಾಯ್ತು ಕೆಂದಾ
ವರೆಯ ವನ ಬೇರೊಂದು ತಾಣದೊ
ಳುರವಣೆಯ ಬೆಳದಿಂಗಳೌಕಿದುದೊಂದು ತಾಣದಲಿ
ಹರಿವ ಯಮುನಾ ನದಿಯನಲ್ಲಿಗೆ
ತರಸಿದವರಾರೆನಲು ಮಣಿ ಬಂ
ಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ (ಸಭಾ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಇಂದ್ರಪ್ರಸ್ಥದಲ್ಲಿ ದುರ್ಯೋಧನನು ಕಂಡ ಆಲಯದ ವರ್ಣನೆಮಾಡಲು ಶುರುಮಾಡಿದ, ಒಂದು ಬದಿಯಲ್ಲಿ ಬಹಳ ವಿಶಾಲವಾದ ಕೆಂದಾವರೆಯ ವನವು ಕಾಣಿಸುತ್ತಿತ್ತು. ಇನ್ನೊಂದು ಕಡೆ ಬೆಳದಿಂಗಳು ಹರಡಿತ್ತು. ಹಸ್ತಿನಾಪುರದ ಬಳಿ ಹರಿಯುವ ಯಮುನಾ ನದಿಯನ್ನು ಇಲ್ಲಿಗೆ ಯಾರು ತರಿಸಿದರು ಎನ್ನುವ ಅನುಮಾನಬರುವಂತೆ ದಿವ್ಯರತ್ನಗಳ ಬೆಳಕು ಒಂದು ಕಡೆ ಬಿದ್ದಿರಲು, ನನ್ನ ಜಾಣ್ಮೆಯನ್ನು ನಾನು ಕಳೆದುಕೊಂಡೆ ಎಂದು ಹೇಳಿದನು.

ಅರ್ಥ:
ಹರಹು: ವಿಸ್ತಾರ, ವೈಶಾಲ್ಯ; ಹಿರಿ: ಹೆಚ್ಚು; ಕೆಂದಾವರೆ: ಕೆಂಪಾದ ಕಮಲ; ವನ: ಕಾಡು; ತಾಣ: ನೆಲೆ, ಬೀಡು; ಉರವಣೆ: ಆತುರ, ಆಧಿಕ್ಯ; ಬೆಳದಿಂಗಳು: ಪೂರ್ಣಚಂದ್ರ, ಹುಣ್ಣಿಮೆ; ಔಕು: ನೂಕು; ಹರಿವ: ಚಲಿಸುವ; ನದಿ: ಸರೋವರ; ತರಸು: ಬರೆಮಾಡು; ಮಣಿ: ಮುತ್ತು, ರತ್ನ; ಬಂಧುರ: ಬಾಗಿರುವುದು, ಮಣಿದಿರುವುದು; ಬೆಳಗಿನ: ದಿನದ; ಲಹರಿ: ರಭಸ, ಆವೇಗ; ಮುರಿ: ಸೀಳು; ಜಾಣು: ಬುದ್ಧಿವಂತಿಕೆ;

ಪದವಿಂಗಡಣೆ:
ಹರಹಿನಲಿ +ಹಿರಿದಾಯ್ತು +ಕೆಂದಾ
ವರೆಯ +ವನ +ಬೇರೊಂದು +ತಾಣದೊಳ್
ಉರವಣೆಯ +ಬೆಳದಿಂಗಳ್+ಔಕಿದುದ್+ಒಂದು +ತಾಣದಲಿ
ಹರಿವ+ ಯಮುನಾ +ನದಿಯನ್+ಇಲ್ಲಿಗೆ
ತರಸಿದವರ್+ಆರೆನಲು +ಮಣಿ +ಬಂ
ಧುರದ +ಬೆಳಗಿನಲಹರಿ+ ಮುರಿದುದು +ತನ್ನ +ಜಾಣುಮೆಯ

ಅಚ್ಚರಿ:
(೧) ಹಿರಿದು, ಉರವಣೆ – ಸಾಮ್ಯಾರ್ಥ ಪದಗಳು
(೨) ದುರ್ಯೋಧನನು ತನ್ನ ಜಾಣ್ಮೆಯನ್ನು ಕಳೆದುಕೊಂಡ ಪರಿ – ಮಣಿ ಬಂಧುರದ ಬೆಳಗಿನಲಹರಿ ಮುರಿದುದು ತನ್ನ ಜಾಣುಮೆಯ