ಪದ್ಯ ೩೪: ಅರ್ಜುನನು ಹೇಗೆ ಯುದ್ಧಕ್ಕನುವಾದನು?

ರಣಕೆ ತವಕಿಸಿ ಬಳಿಕ ತಾಗುವ
ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ (ಭೀಷ್ಮ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತವಕದಿಂದ ಬಂದು, ಬಾಣಗಳ ಹೊಡೆತಕ್ಕೆ ಹೆದರಿ ಓಡಿಹೋಗುವುದು ಇದೆಂತಹ ಕುದುರೆಯಂತಹ ಗುಣ! ಈ ಭಂಡರು ಹೋಗಲಿ ಕಳಿಸಿ ಬಿಡು ಎನ್ನುತ್ತಾ ಅರ್ಜುನನು ತನ್ನ ಗಾಂಡೀವ ಬಿಲ್ಲಿನ ಹೆದೆಯನ್ನು ನುಡಿಸಿ, ಸಿಂಹಗರ್ಜನೆ ಮಾಡಿ ಬಾಣಗಳನ್ನು ಹಿಡಿದು ಯುದ್ಧಕ್ಕನುವಾದನು.

ಅರ್ಥ:
ರಣ: ರಣರಂಗ; ತವಕ: ಬಯಕೆ, ಆತುರ; ಬಳಿಕ: ನಂತರ; ತಾಗು: ಎದುರಿಸು, ಮೇಲೆ ಬೀಳು; ಕಣಿ: ನೋಟ, ನೆಲೆ; ದಾಳಿ: ಆಕ್ರಮಣ; ತಳ್ಳು: ನೂಕು; ವಾರುವ: ಕುದುರೆ; ಗುಣ: ನಡತೆ; ಭಂಡ: ನಾಚಿಕೆ ಇಲ್ಲದವನು; ಇವದಿರು: ಇಷ್ಟು ಜನ; ಹೋಗು: ತೆರಳು, ಗಮಿಸು; ಹೇಳು: ತಿಳಿಸು; ಕೆಣಕು: ರೇಗಿಸು; ಬಿಲು: ಬಿಲ್ಲು; ಉರು: ಹೆಚ್ಚು; ಮಾರ್ಗಣ: ಬಾಣ, ಅಂಬು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಸಮರಾಂಗಣ: ಯುದ್ಧರಂಗ, ರಣರಣ್ಗ; ಸಮ್ಮುಖ: ಎದುರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ರಣಕೆ +ತವಕಿಸಿ +ಬಳಿಕ +ತಾಗುವ
ಕಣಿಯ +ದಾಳಿಗೆ +ತಳ್ಳು+ವಾರುವ
ಗುಣವ್+ಇದೆಂತುಟೊ +ಭಂಡರ್+ಇವದಿರ +ಹೋಗ+ಹೇಳೆನುತ
ಕೆಣಕಿದನು +ಬಿಲುದಿರುವನ್+ಉರು +ಮಾ
ರ್ಗಣದ +ಹೊದೆಗಳ +ಕೆದರಿ +ಸಮರಾಂ
ಗಣಕೆ +ಸಮ್ಮುಖನಾದನ್+ಅರ್ಜುನ +ಸಿಂಹನಾದದಲಿ

ಅಚ್ಚರಿ:
(೧) ಸೈನಿಕರ ಗುಣವನ್ನು ಹೋಲಿಸುವ ಪರಿ – ರಣಕೆ ತವಕಿಸಿ ಬಳಿಕ ತಾಗುವ ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ