ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ (ದ್ರೋಣ ಪರ್ವ, ೮ ಸಂಧಿ, ೬೬ ಪದ್ಯ)
ತಾತ್ಪರ್ಯ:
ನಾಳೆ ನಮ್ಮ ಸೈನ್ಯವನ್ನೆಲ್ಲಾ ಒಂದೇ ಕಡೆ ಸೇರಲಿ, ಯಾದವರು, ಷಡ್ರಥರೂ ಅಲ್ಲಿಗೇ ಬರಲಿ, ನಾಳೆ ಒಂದು ವ್ಯೂಹವನ್ನು ನಾನು ರಚಿಸಿ, ನನ್ನ ಚಾತುರ್ಯ ಮತ್ತು ಪರಾಕ್ರಮವನ್ನು ತೋರುತ್ತೇನೆ. ಸೈಂಧವನ ಅಂಗರಕ್ಷಣೆಗೆ ಭದ್ರವಾದ ಕಾವಲನ್ನೇರ್ಪಡಿಸುತ್ತೇನೆ, ಆಮೇಲೆ ಕೃಷ್ಣನ ಆಲೋಚನೆಯೇನು ಎಂದು ನೋಡುತ್ತೇನೆ ಎಂದು ಕೌರವನಿಗೆ ಹೇಳಿದರು.
ಅರ್ಥ:
ವ್ಯೂಹ: ಗುಂಪು, ಸಮೂಹ; ರಚಿಸು: ನಿರ್ಮಿಸು; ಆಹವ: ಯುದ್ಧ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ಮೋಹರ: ಯುದ್ಧ; ನಡೆತರಲಿ: ಬಂದು ಸೇರಲಿ; ಷಡುರಥ: ಆರು ಮಹಾರಥಿಕರು; ಆದಿ: ಮುಂತಾದ; ಸಾಹಸ: ಪರಾಕ್ರಮ; ಉದಯ: ಬೆಳಗ್ಗೆ; ತೋರುವೆ: ಪ್ರದರ್ಶಿಸು; ಬಾಹುಬಲ: ಪರಾಕ್ರಮ; ಮೈ: ತನು, ದೇಹ; ಮೈಗಾಹ: ದೇಹ ರಕ್ಷಣೆ; ಬಲಿ: ಗಟ್ಟಿ, ದೃಢ; ನೆನಹು: ಆಲೋಚನೆ; ಬಳಿಕ: ನಂತರ;
ಪದವಿಂಗಡಣೆ:
ವ್ಯೂಹವನು+ ರಚಿಸುವೆನು +ನಾಳಿನೊಳ್
ಆಹವಕೆ +ತಳತಂತ್ರವ್+ಒಂದೇ
ಮೋಹರಕೆ +ನಡೆತರಲಿ +ಷಡುರಥರಾದಿ+ ಯಾದವರು
ಸಾಹಸವನ್+ಉದಯದಲಿ +ತೋರುವೆ
ಬಾಹುಬಲವನು +ಸೈಂಧವನ +ಮೈ
ಗಾಹ+ ಬಲಿವೆನು +ಕಾಂಬೆ +ಕೃಷ್ಣನ+ ನೆನಹ +ಬಳಿಕೆಂದ
ಅಚ್ಚರಿ:
(೧) ಆಹವ, ಮೋಹರ – ಸಮಾನಾರ್ಥಕ ಪದಗಳು