ಪದ್ಯ ೪೪: ಕೌರವ ಪಾಳೆಯ ಸ್ಥಿತಿ ಏನಾಯಿತು?

ಪಾಳೆಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ದೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಭಾರಿ ಗಲಭೆಯಾಯಿತು, ನೊಮ್ದ ಯೋಧರು ಸೇರಿ, ಮುಳ್ಳು ಬೇಲಿಯ ಬಳಿ ರಕ್ಷಣೆಗೆ ನಿಂತರು. ವಿಷಯವನ್ನು ತಿಳಿಯಲು ಬೇಹುಗಾರರನ್ನು ದಿಕ್ಕು ದಿಕ್ಕಿಗೆ ಅಟ್ಟಿದರು. ಕುದುರೆಗಳು ಮುಂದೆ ಬಂದು ನಿಂತವು. ತಲೆಕೆದರಿದ ರಾಜರು ಈ ಸದ್ದನ್ನು ಕೇಳಿ ಬೀಡಿನಿಂದ ಹೊರಬಂದರು. ಕೌರವ ಪಾಳೆಯು ಅಸ್ತವ್ಯಸ್ತವಾಯಿತು.

ಅರ್ಥ:
ಪಾಳೆ: ಬಿಡಾರ; ಗಜಬಜ: ಗೊಂದಲ; ತೊಳಲು: ಬವಣೆ, ಸಂಕಟ; ಆಳು: ಯೋಧ; ನೆರೆ: ಗುಂಪು; ಕೋರಡಿ: ಸಾರವಿಲ್ಲದಿರುವಿಕೆ; ಮುಳುವೇಲಿ: ಮುಳ್ಳಿನ ಬೇಲಿ; ದೇಹ: ತನು; ಹರಿಸು: ಚೆಲ್ಲು; ಅಖಿಳ: ಎಲ್ಲಾ; ದೆಸೆ: ದಿಕ್ಕು; ಮೇಲು: ಮುಂದೆ; ಕುದುರೆ: ಅಶ್ವ; ಒದಗು: ಲಭ್ಯ, ದೊರೆತುದು; ಭೂಪಾಲಕ: ರಾಜ; ತಲೆ: ಶಿರ; ಕೆದರು: ಹರಡು; ಹುಯ್ಯಲು: ಪೆಟ್ಟು, ಹೊಡೆತ; ಆಲಿಸು: ಕೇಳು; ಹೊರವಂಟು: ತೆರಳು; ತಳಕೆಳ: ಮೇಲೆ ಕೆಳಗೆ; ನೃಪ: ರಾಜ; ಕಟಕ: ಸೈನ್ಯ, ಗುಂಪು;

ಪದವಿಂಗಡಣೆ:
ಪಾಳೆಯವು +ಗಜಬಜಿಸೆ +ತೊಳಲಿಕೆ
ಆಳು +ನೆರೆದುದು +ಕೋರಡಿಯ +ಮುಳು
ವೇಲಿಗಾಂತರು +ದೇಹ +ಹರಿಸಿದರ್+ಅಖಿಳ+ ದೆಸೆದೆಸೆಗೆ
ಮೇಲು+ಕುದುರೆಗಳ್+ಒದಗಿದವು +ಭೂ
ಪಾಲಕರು +ತಲೆಗೆದರಿ +ಹುಯ್ಯಲನ್
ಆಲಿಸುತ +ಹೊರವಂಟು +ತಳಕೆಳಕಾಯ್ತು+ ನೃಪ+ಕಟಕ

ಅಚ್ಚರಿ:
(೧) ಗಜಬಜಿಸೆ, ದೆಸೆದೆಸೆಗೆ, ತಳಕೆಳ – ಪದಗಳ ಬಳಕೆ