ಪದ್ಯ ೨೨: ಭೀಷ್ಮನಿಗೆ ತಲೆದಿಂಬನ್ನು ಅರ್ಜುನನು ಹೇಗೆ ಸಿದ್ಧಪಡಿಸಿದನು?

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ (ಭೀಷ್ಮ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮಗು ಅರ್ಜುನ, ಬಾಣಗಳ ಹಾಸಿಗೆ ಚೆಂದವಾಗಿದೆ, ಆದರೆ ಬಾಣಗಳ ತಲೆದಿಂಬನ್ನು ಏರ್ಪಡಿಸು ಎಂದು ಭೀಷ್ಮನು ಹೇಳಲು, ಅರ್ಜುನನು ಎದ್ದು ಐದು ಬಾಣಗಳನ್ನು ನೆಲಕ್ಕೆ ನೆಟ್ಟು, ಭೀಷ್ಮನಿಗೆ ತಲೆದಿಂಬನ್ನು ಏರ್ಪಡಿಸಿದನು.

ಅರ್ಥ:
ಮಗ: ಸುತ; ಕೇಳು: ಆಲಿಸು; ಕೂರಂಬು: ಹರಿತವಾದ ಬಾಣ; ಹಾಸಿಕೆ: ಮಂಚ; ಚೆಂದ: ಸೊಗಸು; ಹೊಗರು: ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು, ಖಡ್ಗ; ತಲೆ: ಶಿರ; ಇಂಬು: ಆಶ್ರಯ; ರಚಿಸು: ನಿರ್ಮಿಸು; ಕೈಕೊಂಡು: ಧರಿಸು; ಬಿಗಿ: ಒತ್ತು, ಅಮುಕು, ಗಟ್ಟಿ; ಮಂಡಿಸು: ಕೂಡು, ಬಾಗಿಸು; ಹೊಗರು: ಕಾಂತಿ, ಪ್ರಕಾಶ; ಕವಲು: ಟಿಸಿಲು, ಕವಲೊಡೆದ ಕೊಂಬೆ; ಎಚ್ಚು: ಬಾಣಪ್ರಯೋಗ ಮಾದು; ನೆಗಹು: ಮೇಲೆತ್ತು; ಮಸ್ತಕ: ತಲೆ; ಕುಮಾರ: ಮಗ; ಬಿಲು: ಬಿಲ್ಲು, ಚಾಪ;

ಪದವಿಂಗಡಣೆ:
ಮಗನೆ +ಕೇಳೈ +ಪಾರ್ಥ +ಕೂರಂ
ಬುಗಳ+ ಹಾಸಿಕೆ+ ಚೆಂದವಾಯಿತು
ಹೊಗರ್ +ಅಲಗ +ತಲೆಗ್+ಇಂಬ+ ರಚಿಸ್+ಎನೆ +ಪಾರ್ಥ +ಕೈಕೊಂಡು
ಬಿಗಿದ +ಬಿಲುಗೊಂಡ್+ಎದ್ದು +ಮಂಡಿಸಿ
ಹೊಗರ+ ಕವಲ್+ಅಂಬ್+ಐದನ್+ಎಚ್ಚನು
ನೆಗಹಿದನು +ಮಸ್ತಕವನ್+ಆ+ ಗಂಗಾ+ಕುಮಾರಕನ

ಅಚ್ಚರಿ:
(೧) ಬಾಣದ ಹಾಸಿಗೆಯನ್ನು ವರ್ಣಿಸುವ ಪರಿ – ಕೂರಂಬುಗಳ ಹಾಸಿಕೆ ಚೆಂದವಾಯಿತು