ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜನ ಯಮಳರ ಚಿತ್ರವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ (ಗದಾ ಪರ್ವ, ೮ ಸಂಧಿ, ೨೮ ಪದ್ಯ)
ತಾತ್ಪರ್ಯ:
ಬಲರಾಮನ ಉದ್ರೇಕವನ್ನೂ ಪಾಂಡವರು ಭಯಭೀತರಾದುದನ್ನೂ, ಪಾಂಡವರ ಮನಸ್ಸಿನ ಅಳುಕನ್ನೂ ಶ್ರೀಕೃಷ್ಣನು ನೋಡಿ, ರಜತಗಿರಿಯನ್ನು ಅಡ್ಡಗಟ್ಟು ನಿಲ್ಲುವ ನೀಲಗಿರಿಯಂತೆ ಬಲರಾಮನೆದುರಿಗೆ ಬಂದು ಅಳುಕದೆ ಅವನ ಬಲಗೈಯನ್ನು ಹಿಡಿದನು.
ಅರ್ಥ:
ಹಲಧರ: ಬಲರಾಮ; ಹಲ: ನೇಗಿಲು; ಮಸಕ: ಆಧಿಕ್ಯ, ಹೆಚ್ಚಳ; ಬಲ: ಸೈನ್ಯ; ಚೇಷ್ಟೆ:ವರ್ತನೆ, ನಡವಳಿಕೆ; ವಿಭ್ರಮ: ಭ್ರಮೆ, ಭ್ರಾಂತಿ; ಬಲಿಮಥನ: ಬಲಿ ಚಕ್ರವರ್ತಿಯನ್ನು ನಾಶ ಮಾಡಿದವ (ಕೃಷ್ಣ); ಈಕ್ಷಿಸು: ನೋಡು; ರಜತಾಚಲ: ಹಿಮಾಲಯ; ರಜತ: ಬೆಳ್ಳಿ; ಅಚಲ: ಬೆಟ್ಟ; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗಿರಿ: ಬೆಟ್ಟ; ಅಳುಕು: ಹೆದರು; ಇದಿರು: ಎದುರು; ನಿಂದು: ನಿಲ್ಲು; ಹಿಡಿ: ಗ್ರಹಿಸು; ಬಲಗಯ್ಯ: ಬಲಕೈ;
ಪದವಿಂಗಡಣೆ:
ಹಲಧರನ +ಮಸಕವನು +ಪಾಂಡವ
ಬಲದ +ದುಶ್ಚೇಷ್ಟೆಯನು +ಭೀಮನ
ಫಲುಗುಣನ +ಧರ್ಮಜನ +ಯಮಳರ +ಚಿತ್ರ+ವಿಭ್ರಮವ
ಬಲಿಮಥನನ್+ಈಕ್ಷಿಸುತ +ರಜತಾ
ಚಲವ +ತರುಬುವ +ನೀಲ +ಗಿರಿಯವೊಲ್
ಅಳುಕದ್+ಇದಿರಲಿ +ನಿಂದು +ಹಿಡಿದನು +ಬಲನ +ಬಲಗಯ್ಯ
ಅಚ್ಚರಿ:
(೧) ಉಪಮಾನದ ಪ್ರಯೋಗ – ರಜತಾಚಲವ ತರುಬುವ ನೀಲ ಗಿರಿಯವೊಲಳುಕದಿದಿರಲಿ ನಿಂದು
(೨) ಕೃಷ್ಣನನ್ನು ಬಲಿಮಥನ ಎಂದು ಕರೆದಿರುವುದು
(೩) ಗಿರಿ, ಅಚಲ – ಸಮಾನಾರ್ಥಕ ಪದ