ಪದ್ಯ ೨೯: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೬?

ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ (ಗದಾ ಪರ್ವ, ೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧರ್ಮಜನಲ್ಲಿ ವೈರವಿಲ್ಲ, ನಕುಲ ಸಹದೇವರು ಚಿಕ್ಕವರು, ಅವರ ಮೇಲೆ ಸಿಟ್ಟಿಲ್ಲ. ಅರ್ಜುನನ ಮೇಲೆ ಅರ್ಧ ವೈರವಿದೆ. ಗರ್ವಿತನಾದ ಭೀಮನ ಮಾಂಸವನ್ನು ಕೊಯ್ಕೊಯ್ದು ಭೂತಗಣಗಳನ್ನು ತೃಪ್ತಿಪಡಿಸಿ ಅಣ್ಣನೊಡನೆ ಸಂಧಾನ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದೇಯಲ್ಲಾ? ಕೌರವ ಪರಮವೈರಿಯಾದ ಭೀಮನನ್ನು ಸೀಳಲು ಏಳು ಎಂದು ಕೌರವನನ್ನು ರೇಗಿಸಿದನು.

ಅರ್ಥ:
ಅರಸ: ರಾಜ; ಹಗೆ: ವೈರಿ; ಯಮಳ: ಅವಳಿ ಮಕ್ಕಳು; ತರಳ: ಬಾಲಕ; ಮುನಿಸು: ಕೋಪ, ಸಿಟ್ಟು; ವಿರೋಧಿ: ವೈರಿ; ಗರ್ವಿ: ಅಹಂಕಾರಿ; ಬಾಡು: ಮಾಂಸ; ಕೊಯ್ದು: ಸೀಳು; ಮರುಳ: ಭೂತ; ಬಳಗ: ಗುಂಪು; ತಣಿಸು: ತಂಪು, ಶೈತ್ಯ; ಹಿರಿ: ದೊಡ್ಡವ; ಅರಸ: ರಾಜ; ಸಂಧಾನ: ಸೇರಿಸುವುದು, ಹೊಂದಿಸುವುದು; ನೆರೆ: ಪಕ್ಕ, ಪಾರ್ಶ್ವ; ವೈರಿ: ಶತ್ರು; ಸೀಳು: ಚೂರು, ತುಂಡು; ಅರೆ: ಅರ್ಧ;

ಪದವಿಂಗಡಣೆ:
ಅರಸನಲಿ +ಹಗೆಯಿಲ್ಲ +ಯಮಳರು
ತರಳರಲಿ+ ಮುನಿಸಿಲ್ಲ +ಫಲುಗುಣನ್
ಅರೆವಿರೋಧಿ +ಸಗರ್ವಿ+ ಭೀಮನ +ಬಾಡ+ ಕೊಯ್ಕೊಯ್ದು
ಮರುಳ +ಬಳಗವ +ತಣಿಸಿದಡೆ
ಹಿರಿಯರಸ +ಸಂಧಾನವ್+ಎಂಬೈ
ಕುರುಪತಿಯೆ +ನೆರೆ +ವೈರಿ +ಭೀಮನ +ಸೀಳಲ್+ಏಳೆಂದ

ಅಚ್ಚರಿ:
(೧) ಕೌರವನನ್ನು ಪ್ರಚೋದಿಸುವ ಪರಿ – ಸಗರ್ವಿ ಭೀಮನ ಬಾಡ ಕೊಯ್ಕೊಯ್ದು ಮರುಳ ಬಳಗವ ತಣಿಸು