ಪದ್ಯ ೩೭: ಕೃಷ್ಣನ ಗುಣಗಾನವನ್ನು ಮಾಡಲು ಯಾರು ಆಯಾಸಗೊಳ್ಳುವುದಿಲ್ಲ?

ಹೊಗಳಿ ತಣಿಯವು ವೇದತತಿ ಕೈ
ಮುಗಿದು ದಣಿಯರು ಕಮಲಭವಭವ
ರೊಗುಮಿಗೆಯ ಮಾನಸ ಸಮಾಧಿಯ ಸಾರಸತ್ವದಲಿ
ಬಗೆದು ದಣಿಯರು ಯೋಗಿಗಳು ಕೈ
ಮುಗುಚಿದಣಿಯರು ಕರ್ಮಿಗಳು ಮೂ
ಜಗದ ದೈವದ ದೈವ ಕೃಷ್ಣನ ಬೈವನಿವನೆಂದ (ಸಭಾ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ವೇದಗಳು ಇವನನ್ನು ಎಷ್ಟು ಹೊಗಳಿದರೂ ಬೇಸತ್ತುಕೊಳ್ಳುವುದಿಲ್ಲ. ಬ್ರಹ್ಮ ಶಿವರಿಗೆ ಎಷ್ಟು ಬಾರಿ ಇವನಿಗೆ ಕೈಮುಗಿದರೂ ದಣಿವಾಗುವುದಿಲ್ಲ. ಯೋಗಿಗಳು ಸಮಾಧಿಸ್ಥಿತಿಯಲ್ಲಿ ಇವನನ್ನು ಎಷ್ಟು ಧ್ಯಾನಿಸಿದರೂ ಆಯಾಸಗೊಳ್ಳುವುದಿಲ್ಲ. ಕರ್ಮಿಗಳು ಕೈಯನ್ನು ಎಷ್ಟುಬಾರಿ ನಮಸ್ಕರಿಸಿದರೂ ಆಯಾಸಗೊಳ್ಳುವುದಿಲ್ಲ. ಮೂರುಲೋಕಗಳಲ್ಲಿರುವ ದೈವಗಳ ದೈವವಾದ ಇಂತಹ ಶ್ರೀಕೃಷ್ಣನನ್ನು ಇವನು ಬೈಯುತ್ತಾನೆ.

ಅರ್ಥ:
ಹೊಗಳು: ಪ್ರಶಂಶಿಸು; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವೇದ: ಜ್ಞಾನ, ಶೃತಿ; ತತಿ: ಗುಂಪು, ಸಾಲು; ಕೈಮುಗಿ: ಎರಗು; ದಣಿ: ಆಯಾಸಪಡು, ಬಳಲು; ಕಮಲಭವ: ಕಮಲದಲ್ಲಿ ಹುಟ್ಟಿದವ- ಬ್ರಹ್ಮ; ಭವ: ಶಿವ, ಪರಮೇಶ್ವರ; ಒಗುಮಿಗೆ: ಆಧಿಕ್ಯ, ಹೆಚ್ಚಳ; ಮಾನಸ: ಮನಸ್ಸು; ಸಮಾಧಿ: ಏಕಾಗ್ರತೆ, ತನ್ಮಯತೆ; ಸಾರಸತ್ವ: ಸೃಜನಾತ್ಮಕ; ಬಗೆ: ಎಣಿಸು, ಲಕ್ಷಿಸು; ಯೋಗಿ: ಮುನಿ; ಕೈ: ಕರ, ಹಸ್ತ; ಮುಗುಚು: ಮುಗಿ, ನಮಸ್ಕರಿಸು; ಕರ್ಮಿ: ಕಾಯಕವನ್ನು ಮಾಡುವವರು; ಮೂಜಗ: ತ್ರಿಜಗ; ದೈವ: ಭಗವಂತ; ಬೈವನು: ಜರೆವನು;

ಪದವಿಂಗಡಣೆ:
ಹೊಗಳಿ +ತಣಿಯವು +ವೇದ+ತತಿ +ಕೈ
ಮುಗಿದು +ದಣಿಯರು +ಕಮಲಭವ+ಭವರ್
ಒಗುಮಿಗೆಯ +ಮಾನಸ +ಸಮಾಧಿಯ +ಸಾರಸತ್ವದಲಿ
ಬಗೆದು+ ದಣಿಯರು +ಯೋಗಿಗಳು+ ಕೈ
ಮುಗುಚಿ+ದಣಿಯರು+ ಕರ್ಮಿಗಳು+ ಮೂ
ಜಗದ+ ದೈವದ +ದೈವ +ಕೃಷ್ಣನ +ಬೈವನಿವನೆಂದ

ಅಚ್ಚರಿ:
(೧) ದಣಿ, ತಣಿ; ಬಗೆದು, ಮುಗಿದು – ಪ್ರಾಸ ಪದ
(೨) ಜೋಡಿ ಪದ – ಕಮಲಭವಭವ, ದೈವದ ದೈವ

ಪದ್ಯ ೧೨: ಕೃಷ್ಣನು ವಿದುರನಿಗೆ ಏನು ಹೇಳಿ ಮನೆಯನ್ನು ಪ್ರವೇಶಿಸಿದನು?

ಹಸಿದು ನಾವೈತಂದರೀ ಪರಿ
ಮಸಗಿ ಕುಣಿದಾಡಿದೊಡೆ ಮೇಣೀ
ವಸತಿಯನು ಸುಗಿದೆತ್ತಿ ಬಿಸುಟರೆ ತನಗೆ ತಣಿವಹುದೆ
ವಸುಮತಿಯ ವಲ್ಲಭರು ಮಿಗೆ ಪ್ರಾ
ರ್ಥಿಸಿದೊಡೊಲ್ಲದೆ ಬಂದೆವೈ ನಾ
ಚಿಸದಿರೈ ಬಾ ವಿದುರಯೆನುತೊಳಹೊಕ್ಕನಸುರಾರಿ (ಉದ್ಯೋಗ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿದುರನ ಸಂತೋಷದ ಪರಿಯನ್ನು ಕಂಡು ಕೃಷ್ಣನು, ಎಲೈ ವಿದುರ ನಾವು ಹಸಿದು ಬಂದರೆ ನೀನು ಈ ರೀತಿ ಹರಿದಾಡಿ, ಕುಣಿದಾಡಿದರೆ ವಾಸವಿರುವ ನಿನ್ನೀ ಮನೆಯೇನಾದರು ಹಾನಿಹೊಂದಿದರೆ ನಾನೆಲ್ಲಿ ವಿಶ್ರಮಿಸಲಿ. ಭೂಮಿಯ ಒಡೆಯರು (ಪಾಂಡವರು) ನನ್ನ ಬಳಿ ಅಧಿಕವಾಗಿ ಪ್ರಾರ್ಥಿಸಿದುದರಿಂದ ನಾನಿಲ್ಲಿಗೆ ಬಂದಿದ್ದೇನೆ ಅದು ಬಿಟ್ಟು ಬೇರೇನು ಇಲ್ಲ. ಹೀಗೆ ನೀವು ಹೆಚ್ಚಾಗಿ ಸಂತೋಷವನ್ನು ಪ್ರಕಟಿಸಿದರೆ ನನಗೆ ನಾಚಿಕೆಯಾಗುತ್ತದೆಂದು ವಿದುರನನ್ನು ಕರೆದು ಮನೆಯ ಒಳಕ್ಕೆ ಪ್ರವೇಶಿಸಿದನು.

ಅರ್ಥ:
ಹಸಿ: ಹಸಿವು, ಆಹಾರವನ್ನು ಬಯಸು;ಐತರು: ಬಂದು ಸೇರು; ಪರಿ: ರೀತಿ; ಮಸಗು: ಹರಡು; ಕುಣಿ: ನರ್ತಿಸು; ಮೇಣ್: ಮತ್ತು; ವಸತಿ: ವಾಸಮಾಡುವಿಕೆ; ಸುಗಿ: ಸುಲಿ, ತುಂಡುಮಾಡು; ಎತ್ತು: ಮೇಲೇಳು; ಬಿಸುಟು: ಬಿಸಾಡಿದ, ತ್ಯಜಿಸಿದ; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ವಸುಮತಿ:ಭೂಮಿ; ವಲ್ಲಭ:ಒಡೆಯ, ಪ್ರಭು; ಮಿಗೆ: ಮತ್ತು, ಅಧಿಕ; ಪಾರ್ಥಿಸು: ಆರಾಧಿಸು; ನಾಚಿಸು: ಲಜ್ಜೆ, ಸಿಗ್ಗು; ಬಾ: ಆಗಮಿಸು; ಒಳಗೆ: ಆಂತರ್ಯ; ಹೊಕ್ಕು: ಸೇರು; ಅಸುರಾರಿ: ಅಸುರರ ವೈರಿ (ಕೃಷ್ಣ)

ಪದವಿಂಗಡಣೆ:
ಹಸಿದು+ ನಾವ್+ಐತಂದರ್+ಈ+ ಪರಿ
ಮಸಗಿ +ಕುಣಿದಾಡಿದೊಡೆ +ಮೇಣ್+ಈ
ವಸತಿಯನು +ಸುಗಿದೆತ್ತಿ+ ಬಿಸುಟರೆ+ ತನಗೆ+ ತಣಿವಹುದೆ
ವಸುಮತಿಯ +ವಲ್ಲಭರು+ ಮಿಗೆ+ ಪ್ರಾ
ರ್ಥಿಸಿದೊಡಲ್ಲದೆ +ಬಂದೆವೈ +ನಾ
ಚಿಸದಿರೈ+ ಬಾ +ವಿದುರ+ಯೆನುತ್+ಒಳಹೊಕ್ಕನ್+ಅಸುರಾರಿ

ಅಚ್ಚರಿ:
(೧) ‘ತ’ ಕಾರದ ಜೋಡಿ ಪದ – ತನಗೆ ತಣಿವಹುದೆ
(೨) ‘ವ’ ಕಾರದ ಜೋಡಿ ಪದ – ವಸುಮತಿಯ ವಲ್ಲಭರು
(೩) ವಸತಿ, ವಸುಮತಿ – ಪದಗಳ ಬಳಕೆ

ಪದ್ಯ ೩೪: ದ್ರೌಪದಿಯು ಅರ್ಜುನನ ಬಳಿ ಬಂದಾಗ ಅವಳಿಲ್ಲಿ ಮೂಡಿದ ಭಾವನೆಗಳಾವುವು?

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತ ಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ (ಆದಿ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸುಂದರವಾದ ಮಧುರಭಾವದಿಂದ ಕೂಡಿದ ಕಡೆಗಣ್ಣಿನನೋಟದಿಂದ ಅರ್ಜುನನನ್ನು ಎಷ್ಟು ಬಾರಿ ನೋಡಿದರು ಆ ಕಣ್ಣುಗಳಿಗೆ ಅದು ತಣಿಯಲೇಯಿಲ್ಲ. ರೋಮಾಂಚನಗೊಂಡ ಅವಳ ಸ್ವೇದಗಳಿಂದ ಆಕೆಯ ಮೈ ಒದ್ದೆಯಾಯಿತು. ನಾಚಿಕೆಯ ಭಾರಕ್ಕೆ ಅವಳ ಮನಸ್ಸು ಕುಗ್ಗಿತು, ಮನಸ್ಸು ಒಳ್ಳೆಯ ಭಾವನೆಗಳಿಂದ ಆವೃತಗೊಂಡಿತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಮಧುರ: ಸಿಹಿಯಾದ, ಸವಿ; ಅಪಾಂಗ: ಕಡೆಗಣ್ಣು; ಮುಕ್ಕುಳಿಸಿ: ಹೊರಹೊಮ್ಮು; ತಣಿ:ತೃಪ್ತಿಹೊಂದು, ಸಮಾಧಾನಹೊಂದು; ಕಂಗಳು: ಕಣ್ಣುಗಳು; ಉಬ್ಬಿದ: ಅಗಲವಾದ; ಪುಳಕ: ರೋಮಾಂಚನ; ಜಲ: ನೀರು; ಮುಳುಗು: ಒಳಸೇರು, ಕಾಣದಾಗು; ಮೂಡು: ತೋರು; ಮೈ: ಅಂಗ; ನಿತಂಬಿನಿ: ಚೆಲುವೆ; ತಳಿತ: ಹೊಂದು; ಲಜ್ಜ: ನಾಚಿಕೆ; ಭರ:ತುಂಬ; ಕುಸಿ: ಕೆಳಗೆ ಬೀಳು; ಅವ್ವಳಿಸು: ಅವ್ವಳಿಸು, ನುಗ್ಗು, ಪೀಡಿಸು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಆಂಗಿಕ:ಶರೀರಕ್ಕೆ ಸಂಬಂಧಿಸಿದ; ಉಳಿ:ಬಿಡು; ಸಾತ್ವಿಕ: ಒಳ್ಳೆಯ ಗುಣ; ಭಾವ: ಸಂವೇದನೆ, ಭಾವನೆ; ಅವಗಡಿಸು: ವ್ಯಾಪಿಸು, ಹರಡು; ಮಾನಿನಿ: ಹೆಂಗಸು, ಚೆಲುವೆ;

ಪದವಿಂಗಡಣೆ:
ಲಲಿತ +ಮಧುರ+ಅಪಾಂಗದಲಿ+ ಮು
ಕ್ಕುಳಿಸಿ+ ತಣಿಯವು +ಕಂಗಳ್+ಉಬ್ಬಿದ
ಪುಳಕ+ ಜಲದಲಿ +ಮುಳುಗಿ +ಮೂಡಿತು +ಮೈ +ನಿತಂಬಿನಿಯ
ತಳಿತ+ ಲಜ್ಜಾ+ಭರಕೆ+ ಕುಸಿದ
ವ್ವಳಿಸಿತ್+ಅಂತಃಕರಣವ್+ಆಂಗಿಕಲ್
ಉಳಿತ+ ಸಾತ್ವಿಕ+ ಭಾವವ್+ಅವಗಡಿಸಿತ್ತು +ಮಾನಿನಿಯ

ಅಚ್ಚರಿ:
(೧) ಮಾನಿನಿ, ಲಲಿತ – ಹೆಂಗಸನ್ನು ವರ್ಣಿಸುವ ಪದ, ಪದ್ಯದ ಮೊದಲ ಮತ್ತು ಕೊನೆ ಪದ
(೨) ಪ್ರಿಯನನ್ನು ನೋಡಿದಾಗ ಮೈಯಲ್ಲಿ ಮೂಡುವ ಭಾವನೆಗಳ ಸ್ಪಷ್ಟ ಚಿತ್ರಣ
(೩) ಮುಳುಗಿ, ಅವ್ವಳಿಸಿ, ಮೂಡು, ಮುಕ್ಕುಳಿಸಿ, ತಣಿ,ಅವಗಡಿಸು – ಭಾವನೆಗಳನ್ನು ಇಮ್ಮಡಿಗೊಳಿಸುವ ಪದಗಳ ಬಳಕೆ