ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ (ಗದಾ ಪರ್ವ, ೭ ಸಂಧಿ, ೭ ಪದ್ಯ)
ತಾತ್ಪರ್ಯ:
ಮತ್ತೆ ಮತ್ತೆ ಆಯಾಸವನ್ನು ಕಳೆದುಕೊಳ್ಳಲು ಹಿಂದಕ್ಕಿ ಹೋಗಿ ಕುಳಿತು ಕರ್ಪೂರ ವೀಳೆಯವನ್ನು ಹಾಕಿಕೊಳ್ಳುತ್ತಿದ್ದರು. ಅವರ ಶಕ್ತಿ ಚಿಗುರಿತು. ಮನಸ್ಸಿನ ಮತ್ಸರ ಒಳಗೇ ಇದ್ದುದು ತಡಿಕೆ ಬಲೆಯನ್ನು ಮುರಿದು ಹೊರಸಿಡಿಯಿತು.
ಅರ್ಥ:
ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಕರ್ಪುರ: ಸುಗಂಧ ದ್ರವ್ಯ; ಕವಳ: ಊಟ; ಅಡಸು: ತುರುಕು; ತಾಳಿಗೆ: ಗಂಟಲು; ಬಳಿಕ: ನಂತರ; ಹೆರಸಾರ: ಹಿಂದಕ್ಕೆ ಸರಿ; ಸಮರ: ಯುದ್ಧ; ಶ್ರಮ: ಆಯಾಸ; ನಿವಾರಣ: ಕಡಿಮೆಯಾಗು; ಕಡುಹು: ಸಾಹಸ, ಹುರುಪು; ತಳಿತು: ಚಿಗುರು; ಪೂತು: ಭಲೇ; ಫಲ: ಪ್ರಯೋಜನ; ಮಚ್ಚರ: ಮತ್ಸರ, ಹೊಟ್ಟೆಕಿಚ್ಚು; ಮಸಕ: ಆಧಿಕ್ಯ, ಹೆಚ್ಚಳ; ತಡಿಕೆ: ತೆರೆ, ಮರೆ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ಮನ: ಮನಸ್ಸು; ಬಲೆ: ಜಾಲ;
ಪದವಿಂಗಡಣೆ:
ಅಡಿಗಡಿಗೆ +ಕರ್ಪುರದ+ ಕವಳವನ್
ಅಡಸಿದರು +ತಾಳಿಗೆಗೆ +ಬಳಿಕ್+ಅಡಿ
ಗಡಿಗೆ+ ಹೆರಸಾರಿದರು +ಸಮರ+ಶ್ರಮ+ ನಿವಾರಣಕೆ
ಕಡುಹು +ತಳಿತುದು +ಪೂತು +ಫಲವಾಯ್ತ್
ಅಡಿಗಡಿಗೆ+ ಮಚ್ಚರದ+ ಮಸಕದ
ತಡಿಕೆ+ಬಲೆ +ನುಗ್ಗಾಯ್ತು+ ಮನ +ಕುರುಪತಿಯ +ಪವನಜನ
ಅಚ್ಚರಿ:
(೧) ಅಡಿಗಡಿಗೆ – ೩ ಬಾರಿ ಪ್ರಯೋಗ
(೨) ರೂಪಕದ ಪ್ರಯೋಗ – ಮಚ್ಚರದ ಮಸಕದ ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ