ಪದ್ಯ ೯೩: ಧರ್ಮರಾಯನು ತನ್ನ ವಿಚಾರದ ಬಗ್ಗೆ ಯಾರನ್ನು ಕೇಳಿದನು?

ಹೋಹುದೇನಭಿಮತವೆ ಧೂರ್ತ
ವ್ಯೂಹವದು ಭೀಷ್ಮಾದಿ ಹಿರಿಯರು
ಸಾಹಸಿಗರಲ್ಲದೆ ರಹಸ್ಯಕೆ ಸಲ್ಲರವರುಗಳು
ಕಾಹುರರು ಕೌರವರು ಸಮರೋ
ತ್ಸಾಹಶಕ್ತಿಗೆ ಠಾವದಲ್ಲ
ವ್ಯಾಹತವೆ ಮತವೆಂದು ಭೀಮಾದಿಗಳ ಬೆಸಗೊಂಡ (ಸಭಾ ಪರ್ವ, ೧೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ನಾವೆಲ್ಲರು ಈ ಆಮಂತ್ರಣದ ಮೇರೆಗೆ ಹಸ್ತಿನಾಪುರಕ್ಕೆ ಹೊಗುವುದು ನಿಮಗೆ ಒಪ್ಪಿಗೆಯೇ? ಅದು ಧೂರ್ತರ ಕೂಟ, ಭೀಷ್ಮರೇ ಮೊದಲಾದ ವೀರರೊಂದಿಗೆ ಅವರು ಸಮಾಲೋಚನೆ ಮಾಡಿರುವುದಿಲ್ಲ. ಕೌರವರು ಕೋಪೋದ್ವೇಗದವರು. ಅದು ಯುದ್ಧಮಾಡುವ ಸ್ಥಳವಲ್ಲ. ನನ್ನ ಅಭಿಪ್ರಾಯ ಸರಿಯಿದಿಯೇ? ಎಂದು ಭೀಮನೇ ಮೊದಲಾದವರನ್ನು ಕೇಳಿದನು.

ಅರ್ಥ:
ಹೋಹುದು: ತೆರಳು, ಹೋಗು; ಅಭಿಮತ: ಅಭಿಪ್ರಾಯ, ವಿಆರ; ಧೂರ್ತ: ದುಷ್ಟ; ವ್ಯೂಹ: ಗುಂಪು; ಹಿರಿಯರು: ದೊಡ್ಡವರು; ಸಾಹಸಿ: ಪರಾಕ್ರಮಿ; ರಹಸ್ಯ: ಗುಪ್ತ; ಸಲ್ಲರು: ಸರಿಹೊಂದು, ಅನ್ವಯಿಸು; ಕಾಹುರ: ಆವೇಶ, ಸೊಕ್ಕು, ಕೋಪ; ಸಮರ: ಯುದ್ಧ; ಉತ್ಸಾಹ: ಹುರುಪು; ಶಕ್ತಿ: ಬಲ; ಠಾವ: ಸ್ಥಳ; ಅವ್ಯಾಹತ: ತಡೆಯಿಲ್ಲದ, ಅಖಂಡ; ಮತ: ವಿಚಾರ; ಆದಿ: ಮುಂತಾದ; ಬೆಸಸು: ತಿಳಿಸು;

ಪದವಿಂಗಡಣೆ:
ಹೋಹುದೇನ್+ಅಭಿಮತವೆ+ ಧೂರ್ತ
ವ್ಯೂಹವದು +ಭೀಷ್ಮಾದಿ +ಹಿರಿಯರು
ಸಾಹಸಿಗರಲ್ಲದೆ+ ರಹಸ್ಯಕೆ+ ಸಲ್ಲರ್+ಅವರುಗಳು
ಕಾಹುರರು+ ಕೌರವರು+ ಸಮರೋ
ತ್ಸಾಹ+ಶಕ್ತಿಗೆ+ ಠಾವದಲ್ಲ್
ಅವ್ಯಾಹತವೆ +ಮತವೆಂದು +ಭೀಮಾದಿಗಳ+ ಬೆಸಗೊಂಡ

ಅಚ್ಚರಿ:
(೧) ಕೌರವರನ್ನು ವರ್ಣಿಸುವ ಬಗೆ – ಕಾಹುರರು ಕೌರವರು, ಧೂರ್ತ ವ್ಯೂಹವದು