ಪದ್ಯ ೩೬: ದುರ್ಯೋಧನನು ಹಸ್ತಿನಾವತಿಯನ್ನು ಯಾವ ಹೊತ್ತಿನಲ್ಲಿ ಸೇರಿದನು?

ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮಸನ್ಯದಲಿರುಳು ಹೊಕ್ಕನು ಹಸ್ತಿನಾಪುರವ (ಸಭಾ ಪರ್ವ, ೧೨ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭೂಮಿಯ ಉದ್ದಗಲದ ಎಲ್ಲಾ ರಾಜರೊಡನೆ ದುರ್ಯೋಧನನು ಇಂದ್ರಪ್ರಸ್ಥ ನಗರದಿಂದ ಹಿಂದಿರುಗಿದನು. ಇಂದ್ರಪ್ರಸ್ಥದಲ್ಲಾದ ನಗೆಗೀಡಿನ ಪ್ರಸಂಗ ಅವನ ಹೃದಯದಲ್ಲಿ ತಾಮಸಾಗ್ನಿಯನ್ನು ಹೊತ್ತಿಸಿತ್ತು. ಆ ಪ್ರಸಂಗದಿಂದ ಕೋಪಗೊಂಡಿದ್ದರಿಂದ ರೋಷಾಗ್ನಿಯ ಹೊಗೆಯು ಅವನ ಮುಖವನ್ನು ಕಪ್ಪಾಗಿಸಿತ್ತು. ಹಸ್ತಿನಾಪುರದ ಊರ ಹೊರಗೇ ಬೀಡುನ್ನು ರಚಿಸಿ ಅಲ್ಲೇ ಕಾಲಕಳೆದನು. ಪಾಂಡವರ ಮೇಲಿನ ದ್ವೇಷದಿಂದ ಕುದಿಯುತ್ತಿದ್ದ ದುರ್ಯೋಧನನು ರಾತ್ರಿಯಾದ ಮೇಲೆ ಹಸ್ತಿನಾವತಿಯನ್ನು ಪ್ರವೇಶಿಸಿದನು.

ಅರ್ಥ:
ಭೂಮಿ: ಧರಿತ್ರಿ; ಲಂಬ: ಅಗಲ; ನಿಖಿಳ: ಎಲ್ಲಾ; ಭೂಪ: ರಾಜ; ಸ್ತೋಮ: ಗುಂಪು; ಸಹಿತ: ಜೊತೆ; ಹೃತ್: ಎದೆ, ಹೃದಯ; ತಾಮಸ: ಕತ್ತಲೆ, ಅಂಧಕಾರ; ಚಾವಡಿ: ಓಲಗಶಾಲೆ, ಸಭಾಸ್ಥಾನ; ಝಾಡಿ: ಕಾಂತಿ; ರೋಷ: ಕೋಪ; ಪಾವಕ: ಅಗ್ನಿ, ಬೆಂಕಿ; ಧೂಮ: ಹೊಗೆ; ಮುಖ: ಆನನ; ಐತರು: ಬಂದು ಸೇರು; ಗಜಪುರ: ಹಸ್ತಿನಾಪುರ; ಸೀಮೆ: ಗಡಿ; ಪಾಳಯ: ಬೀಡು, ಶಿಬಿರ; ಬಿಡಿಸು: ರಚಿಸು; ವೈಮನಸ್ಯ: ಹಗೆತನ; ಇರುಳು: ರಾತ್ರಿ; ಹೊಕ್ಕು: ಸೇರು; ಪುರ: ಊರು;

ಪದವಿಂಗಡಣೆ:
ಭೂಮಿಲಂಬದ+ ನಿಖಿಳ +ಭೂಪ
ಸ್ತೋಮ +ಸಹಿತ +ಸುಯೋಧನನು +ಹೃ
ತ್ತಾಮಸದ+ ಚಾವಡಿಯ+ ಝಾಡಿಯ +ರೋಷ +ಪಾವಕದ
ಧೂಮಮುಖನೈತಂದು +ಗಜಪುರ
ಸೀಮೆಯಲಿ +ಪಾಳಯವ +ಬಿಡಿಸಿದ
ವೈಮಸನ್ಯದಲ್+ಇರುಳು +ಹೊಕ್ಕನು +ಹಸ್ತಿನಾಪುರವ

ಅಚ್ಚರಿ:
(೧) ದುರ್ಯೋಧನನ ಕೋಪದ ಛಾಯೆ – ಸುಯೋಧನನು ಹೃತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ ಧೂಮಮುಖನೈತಂದು
(೨) ಗಜಪುರ, ಹಸ್ತಿನಾಪುರ – ಸಮಾನಾರ್ಥಕ ಪದ