ಭೂಮಿಲಂಬದ ನಿಖಿಳ ಭೂಪ
ಸ್ತೋಮ ಸಹಿತ ಸುಯೋಧನನು ಹೃ
ತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ
ಧೂಮಮುಖನೈತಂದು ಗಜಪುರ
ಸೀಮೆಯಲಿ ಪಾಳಯವ ಬಿಡಿಸಿದ
ವೈಮಸನ್ಯದಲಿರುಳು ಹೊಕ್ಕನು ಹಸ್ತಿನಾಪುರವ (ಸಭಾ ಪರ್ವ, ೧೨ ಸಂಧಿ, ೩೬ ಪದ್ಯ)
ತಾತ್ಪರ್ಯ:
ಭೂಮಿಯ ಉದ್ದಗಲದ ಎಲ್ಲಾ ರಾಜರೊಡನೆ ದುರ್ಯೋಧನನು ಇಂದ್ರಪ್ರಸ್ಥ ನಗರದಿಂದ ಹಿಂದಿರುಗಿದನು. ಇಂದ್ರಪ್ರಸ್ಥದಲ್ಲಾದ ನಗೆಗೀಡಿನ ಪ್ರಸಂಗ ಅವನ ಹೃದಯದಲ್ಲಿ ತಾಮಸಾಗ್ನಿಯನ್ನು ಹೊತ್ತಿಸಿತ್ತು. ಆ ಪ್ರಸಂಗದಿಂದ ಕೋಪಗೊಂಡಿದ್ದರಿಂದ ರೋಷಾಗ್ನಿಯ ಹೊಗೆಯು ಅವನ ಮುಖವನ್ನು ಕಪ್ಪಾಗಿಸಿತ್ತು. ಹಸ್ತಿನಾಪುರದ ಊರ ಹೊರಗೇ ಬೀಡುನ್ನು ರಚಿಸಿ ಅಲ್ಲೇ ಕಾಲಕಳೆದನು. ಪಾಂಡವರ ಮೇಲಿನ ದ್ವೇಷದಿಂದ ಕುದಿಯುತ್ತಿದ್ದ ದುರ್ಯೋಧನನು ರಾತ್ರಿಯಾದ ಮೇಲೆ ಹಸ್ತಿನಾವತಿಯನ್ನು ಪ್ರವೇಶಿಸಿದನು.
ಅರ್ಥ:
ಭೂಮಿ: ಧರಿತ್ರಿ; ಲಂಬ: ಅಗಲ; ನಿಖಿಳ: ಎಲ್ಲಾ; ಭೂಪ: ರಾಜ; ಸ್ತೋಮ: ಗುಂಪು; ಸಹಿತ: ಜೊತೆ; ಹೃತ್: ಎದೆ, ಹೃದಯ; ತಾಮಸ: ಕತ್ತಲೆ, ಅಂಧಕಾರ; ಚಾವಡಿ: ಓಲಗಶಾಲೆ, ಸಭಾಸ್ಥಾನ; ಝಾಡಿ: ಕಾಂತಿ; ರೋಷ: ಕೋಪ; ಪಾವಕ: ಅಗ್ನಿ, ಬೆಂಕಿ; ಧೂಮ: ಹೊಗೆ; ಮುಖ: ಆನನ; ಐತರು: ಬಂದು ಸೇರು; ಗಜಪುರ: ಹಸ್ತಿನಾಪುರ; ಸೀಮೆ: ಗಡಿ; ಪಾಳಯ: ಬೀಡು, ಶಿಬಿರ; ಬಿಡಿಸು: ರಚಿಸು; ವೈಮನಸ್ಯ: ಹಗೆತನ; ಇರುಳು: ರಾತ್ರಿ; ಹೊಕ್ಕು: ಸೇರು; ಪುರ: ಊರು;
ಪದವಿಂಗಡಣೆ:
ಭೂಮಿಲಂಬದ+ ನಿಖಿಳ +ಭೂಪ
ಸ್ತೋಮ +ಸಹಿತ +ಸುಯೋಧನನು +ಹೃ
ತ್ತಾಮಸದ+ ಚಾವಡಿಯ+ ಝಾಡಿಯ +ರೋಷ +ಪಾವಕದ
ಧೂಮಮುಖನೈತಂದು +ಗಜಪುರ
ಸೀಮೆಯಲಿ +ಪಾಳಯವ +ಬಿಡಿಸಿದ
ವೈಮಸನ್ಯದಲ್+ಇರುಳು +ಹೊಕ್ಕನು +ಹಸ್ತಿನಾಪುರವ
ಅಚ್ಚರಿ:
(೧) ದುರ್ಯೋಧನನ ಕೋಪದ ಛಾಯೆ – ಸುಯೋಧನನು ಹೃತ್ತಾಮಸದ ಚಾವಡಿಯ ಝಾಡಿಯ ರೋಷ ಪಾವಕದ ಧೂಮಮುಖನೈತಂದು
(೨) ಗಜಪುರ, ಹಸ್ತಿನಾಪುರ – ಸಮಾನಾರ್ಥಕ ಪದ