ಪದ್ಯ ೮೬: ದೇವತೆಗಳು ಏನೆಂದು ಕೂಗಿದರು?

ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆ ಜಡಿದುದು ಝಳದಝಾಡಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ (ಅರಣ್ಯ ಪರ್ವ, ೮ ಸಂಧಿ, ೮೬ ಪದ್ಯ)

ತಾತ್ಪರ್ಯ:
ಆ ದಿನದ ಉತ್ಸವಕ್ಕೆ ದೇವತೆಗಳು ಗುಂಪುಗುಂಪಾಗಿ ದೇವೇಂದ್ರನರಮನೆಗೆ ಬಂದು ಅರಮನೆಯಲ್ಲಿ ಝಳದಂತಹ ಶಾಖವುಂಟಾಯಿತು. ದೇವತೆಗಳ ಮಂದಿಯನ್ನು ತೊಲಗಿಸು. ಜಾಗ ಬಿಡು, ಮುಂದೆ ನಿಂತವರನ್ನು ಹೊಯ್ಯಿ, ಸದ್ದು ಮಾಡುವುದನ್ನು ನಿಲ್ಲಿಸಿ ಎಂದು ದೇವತೆಗಳು ಕೂಗಿದರು.

ಅರ್ಥ:
ಉತ್ಸವ: ಸಮಾರಂಭ; ಅಮರ: ಸುರರು, ದೇವತೆ; ನಿಕರ: ಗುಂಪು; ಸಂದಣಿ: ಸಮೂಹ; ಇಂದ್ರ: ಸುರಪತಿ; ಮಂದಿರ: ಆಲಯ; ಒತ್ತೊತ್ತು: ಹತ್ತಿರ; ಜಡಿ:ಝಳಪಿಸು, ಹರಡು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಮಂದಿ: ಜನ; ತೊಲಗು: ಹೊರನಡೆ; ತೆರಹು: ಎಡೆ, ಜಾಗ; ಮುಂದಣ: ಮುಂದಿನ; ಗಜಬಜ: ಗೊಂದಲ; ಮಾಣು: ನಿಲ್ಲಿಸು; ಗರ್ಜಿಸು: ಜೋರಾಗಿ ಹೇಳು; ಆಸ್ಥಾನ: ಓಲಗ; ಸುರನಿಕರ: ದೇವತೆಗಳ ಗುಂಪು;

ಪದವಿಂಗಡಣೆ:
ಅಂದಿನ್+ಉತ್ಸವದ್+ಅಮರ +ನಿಕರದ
ಸಂದಣಿಯನ್+ಏನೆಂಬೆನ್+ಇಂದ್ರನ
ಮಂದಿರದೊಳ್+ಒತ್ತೊತ್ತೆ +ಜಡಿದುದು+ ಝಳದ+ಝಾಡಿಯಲಿ
ಮಂದಿ +ತೊಲಗಲಿ+ ತೆರಹುಗೊಡು+ ಹೊಯ್
ಮುಂದಣವರನು+ ಗಜಬಜವ+ ಮಾ
ಣೆಂದು +ಗರ್ಜಿಸಿತ್+ಇಂದ್ರನ್+ಆಸ್ಥಾನದಲಿ+ ಸುರ+ನಿಕರ

ಅಚ್ಚರಿ:
(೧) ಅಮರ, ಸುರ; ಸಂದಣಿ, ನಿಕರ; ಝಳ, ಝಾಡಿ – ಸಮನಾರ್ಥಕ ಪದಗಳು