ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ (ಆದಿ ಪರ್ವ, ೫ ಸಂಧಿ, ೩೦ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ವೇದವ್ಯಾಸರು ಬಂದು ಭೀಷ್ಮ, ಧೃತರಾಷ್ಟ್ರ ಮೊದಲಾದವರಿಗೆ ಬೋಧಿಸಿ ಅವರ ಶೋಕಜ್ವರವನ್ನು ಬಿಡಿಸಿದರು. ಬಳಿಕ ಯೋಜನಗಂಧಿಯನ್ನು ಕರೆದು, ಅಮ್ಮಾ ಇನ್ನು ನೀವಿಲ್ಲಿರುವುದು ಸೂಕ್ತವಲ್ಲ. ನಿಮ್ಮ ಭರತವಂಶದಲ್ಲಿ ಬೆಂಕಿ ಹುಟ್ತಿದೆ, ಇದು ಸಮಸ್ತ ಕ್ಷತ್ರಿಯಕುಲವನ್ನೂ ಸುಡುತ್ತದೆ ಎಂದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಬೋಧಿಸು: ತಿಳುವಳಿಕೆ ಹೇಳು; ಬಹಳ: ತುಂಬ; ಶೋಕ: ದುಃಖ; ಜ್ವರ: ಬೇನೆ; ಬಿಡುಗಡೆ: ನಿವಾರಣೆ, ವಿಮೋಚನೆ, ಮುಕ್ತಿ; ಪಾರಾಶರಿ: ವೇದವ್ಯಾಸ; ವ್ರತಿ: ತಪಸ್ವಿ; ಕರೆದು: ಬರೆಮಾಡು; ಬೇಡ: ತ್ಯಜಿಸು; ತಾಯೆ: ಮಾತೆ; ವಂಶ: ಕುಲ; ಕಿಚ್ಚು: ಬೆಂಕಿ; ಅರುಹು: ತಿಳಿಸು, ಹೇಳು; ಉರುಹು: ಸುಡು; ನೃಪ: ರಾಜ; ಕುಲ: ವಂಶ; ಒಗೆ: ಹುಟ್ಟು;
ಪದವಿಂಗಡಣೆ:
ಅರಸ+ ಕೇಳೈ +ಭೀಷ್ಮ+ ಧೃತರಾ
ಷ್ಟ್ರರನು+ ಬೋಧಿಸಿ +ಬಹಳ +ಶೋಕ
ಜ್ವರಕೆ +ಬಿಡುಗಡೆ +ಮಾಡಿದನು +ಪಾರಾಶರಿ+ವ್ರತಿಪ
ಕರೆದು +ಯೋಜನಗಂಧಿಯನು +ನೀ
ವಿರಲು+ ಬೇಡೌ +ತಾಯೆ +ನಿಮ್ಮೀ
ಭರತವಂಶದೊಳ್+ಒಗೆದ +ಕಿಚ್ಚ್+ಉರುಹುವುದು +ನೃಪ+ಕುಲವ
ಅಚ್ಚರಿ:
(೧) ಅರಸ, ನೃಪ – ಪದ್ಯದ ಮೊದಲ ಮತ್ತು ಕೊನೆ ಪದ