ಪದ್ಯ ೪೫: ದುರ್ಯೋಧನನು ಎಲ್ಲಿ ರಾಜನಾಗಿರುವೆನೆಂದು ಹೇಳಿದನು?

ಆ ಯುಧಿಷ್ಠಿರ ಸಹಿತ ನೀನೇ
ರಾಯನಾಗಿರು ಮೇಣು ನಮ್ಮೀ
ತಾರ್ಯಿ ಸಂತಸಬಡಲಿ ದುಶ್ಯಾಸನನ ಪಟ್ಟದಲಿ
ರಾಯತನವೆಮಗಿಂದ್ರ ಲೋಕದ
ಲಾಯದಲಿ ದಿಟವೆಂದು ನುಡಿವರು
ಜೋಯಿಸರು ಸಾಕವರ ವಚನ ನಿರರ್ಥವಲ್ಲೆಂದ (ಸಭಾ ಪರ್ವ, ೧೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನೊಡನೆ ನೀನೇ ರಾಜನಾಗಿರು. ಇಲ್ಲದಿದ್ದರೆ ನಮ್ಮ ತಾಯಿಯು ದುಶ್ಯಾಸನನಿಗೆ ಪಟ್ಟಕಟ್ಟಿ ಸಂತೋಷದಿಮ್ದಿರಲಿ, ನಾನು ದೇವಲೋಕದ ಲಾಯದಲ್ಲಿ ರಾಜನಾಗಿರುವೆನೆಂದು ಜೋಯಿಸರು ಹೇಳುತ್ತಾರೆ, ಅವರ ಮಾತು ವ್ಯರ್ಥವಾಗದಿರಲಿ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ರಾಯ: ರಾಜ; ಮೇಣ್: ಮತ್ತು; ತಾಯಿ: ಮಾತೆ; ಸಂತಸ: ಸಂತೋಷ; ಪಟ್ಟ: ಪದವಿ; ಇಂದ್ರ: ಶಕ್ರ, ಸುರರ ರಾಜ; ಲೋಕ: ಜಗತ್ತು; ಲಾಯ: ಅಶ್ವಶಾಲೆ, (ಇಲ್ಲಿ ಇಂದ್ರಲೋಕ ಎಂದು ಅರ್ಥೈಸುವುದು); ದಿಟ:ಸತ್ಯ; ನುಡಿ: ಮಾತು; ಜೋಯಿಸರು: ಶುಭ ಮತ್ತು ಅಶುಭಕಾರ್ಯಗಳಲ್ಲಿ ನೆರವಾಗಿ ಕೆಲಸಗಳನ್ನು ನಡೆಸಿಕೊಡುವವರು; ಸಾಕು: ಕೊನೆ; ವಚನ: ಮಾತು; ನಿರರ್ಥಕ: ವ್ಯರ್ಥವಾದುದು;

ಪದವಿಂಗಡಣೆ:
ಆ +ಯುಧಿಷ್ಠಿರ +ಸಹಿತ +ನೀನೇ
ರಾಯನಾಗಿರು +ಮೇಣು +ನಮ್ಮೀ
ತಾಯಿ +ಸಂತಸಬಡಲಿ +ದುಶ್ಯಾಸನನ +ಪಟ್ಟದಲಿ
ರಾಯತನವ್+ಎಮಗ್+ಇಂದ್ರ +ಲೋಕದ
ಲಾಯದಲಿ +ದಿಟವೆಂದು +ನುಡಿವರು
ಜೋಯಿಸರು+ ಸಾಕ್+ಅವರ+ ವಚನ +ನಿರರ್ಥವಲ್ಲೆಂದ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳಲು – ರಾಯತನವೆಮಗಿಂದ್ರ ಲೋಕದಲಾಯದಲಿ