ಬಳಿಕಲಾ ಪಾಂಡುವಿನ ಶ್ರಾದ್ಧದೆ
ನಳಿನನಾಭಾದಿಗಳು ಭೋಜಕ
ರೊಲಿದು ಹರಸಿದರಂದು ಪಾಂಡುಕುಮಾರರೈವರನು
ಕಳುಹಿದರು ಮುನಿವರರ ತಮ್ಮಯ
ನಿಳಯಕಾಗಲು ಬಳಿಕ ಜೈಮಿನಿ
ಮುಳುಗಿದನು ಪರಿತುಷ್ಟನಾದನು ಹರಿಕೃಪಾಬ್ಧಿಯಲಿ (ಅರಣ್ಯ ಪರ್ವ, ೩ ಸಂಧಿ, ೨೨ ಪದ್ಯ)
ತಾತ್ಪರ್ಯ:
ಶ್ರಾದ್ಧ ಕಾರ್ಯಗಳೆಲ್ಲಾ ಮುಗಿದ ಮೇಲೆ, ಶ್ರೀಕೃಷ್ಣನೇ ಮೊದಲಾಗಿ ಎಲ್ಲರೂ ಊಟಮಾಡಿ, ಪಾಂಡವರನ್ನು ಆಶೀರ್ವದಿಸಿದರು. ನಂತರ ಋಷಿಗಳು ತಮ್ಮ ಆಶ್ರಮಕ್ಕೆ ಹಿಂದಿರುಗಿದರು, ಜೈಮಿನಿ ಮುನಿಗಳು ಶ್ರೀಕೃಷ್ಣನ ಕೃಪಾಸಾಗರದಲ್ಲಿ ಮುಳುಗಿ ಬಹಳವಾಗಿ ತುಷ್ಟಿಯನ್ನು ಅನುಭವಿಸಿದರು.
ಅರ್ಥ:
ಬಳಿಕ: ನಂತರ; ಶ್ರಾದ್ಧ: ತಿಥಿ; ನಳಿನನಾಭ: ವಿಷ್ಣು; ಆದಿ: ಮುಂತಾದ; ಭೋಜಕ: ಊಟಮಾದು; ಒಲಿ: ಸಮ್ಮತಿಸು; ಹರಸು: ಆಶೀರ್ವದಿಸು; ಕುಮಾರ: ಮಕ್ಕಳು; ಕಳುಹು: ಬೀಳ್ಕೊಡು; ಮುನಿ: ಋಷಿ; ನಿಳಯ: ಮನೆ; ಬಳಿಕ: ನಂತರ; ಮುಳುಗು: ಹುದುಗಿರು, ಒಳಸೇರು; ಪರಿತುಷ್ಟ: ತೃಪ್ತಿ; ಕೃಪ: ಕರುಣೆ; ಅಬ್ಧಿ: ಸಮುದ್ರ;
ಪದವಿಂಗಡಣೆ:
ಬಳಿಕಲಾ +ಪಾಂಡುವಿನ +ಶ್ರಾದ್ಧದೆ
ನಳಿನನಾಭ+ಆದಿಗಳು +ಭೋಜಕರ್
ಒಲಿದು +ಹರಸಿದರ್+ಅಂದು +ಪಾಂಡುಕುಮಾರರ್+ಐವರನು
ಕಳುಹಿದರು +ಮುನಿವರರ+ ತಮ್ಮಯ
ನಿಳಯಕಾಗಲು+ ಬಳಿಕ+ ಜೈಮಿನಿ
ಮುಳುಗಿದನು +ಪರಿತುಷ್ಟನಾದನು +ಹರಿಕೃಪಾಬ್ಧಿಯಲಿ
ಅಚ್ಚರಿ:
(೧) ನಳಿನನಾಭ, ಹರಿ – ಕೃಷ್ಣನನ್ನು ಕರೆದ ಬಗೆ