ಪದ್ಯ ೧೨: ಶಕುನಿಯು ಪಾಂಡವರ ಬಗ್ಗೆ ಏನು ನುಡಿದನು?

ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ (ಅರಣ್ಯ ಪರ್ವ, ೧೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ರಾಜ, ಪಾಂಡವರು ಮೋಸದಿಂದ ಕೌರವರನ್ನು ಹಾಳು ಮಾಡದೆ ಬಿಡುವುದಿಲ್ಲ. ಜೂಜಿನ ಸಭೆಯಲ್ಲಿ ಅವರು ಮಾಡಿದ ಪ್ರತಿಜ್ಞೆಯನ್ನು ಮರೆತಿರಾ? ಅವರು ಸಜ್ಜನರು, ಸಾಧುಗಳು, ನಿಮ್ಮ ಮಕ್ಕಳು ದುಷ್ಟರು, ಅಸಾಧುಗಳೆಂದು ನಿಮ್ಮ ಮನಸ್ಸಿನಲ್ಲಿ ತೋರಿತೇ ಎಂದು ಶಕುನಿಯು ಧೃತರಾಷ್ಟ್ರನನ್ನು ಕೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ಉಪಾಯ: ಯುಕ್ತಿ, ಹಂಚಿಕೆ; ಕೆಡಿಸು: ಹಾಳುಮಾಡು; ಮಾಣು: ನಿಲ್ಲು; ಪವನಜ: ಭೀಮ; ಭಾಷೆ: ಮಾತು, ನುಡಿ; ಮರೆ: ನೆನಪಿನಿಂದ ದೂರತಳ್ಳು; ಜೂಜು: ಜುಗಾರಿ, ಸಟ್ಟ; ಸಭೆ: ದರ್ಬಾರು; ಸುಜನ: ಒಳ್ಳೆಯ ಜನ; ಖಳ: ದುಷ್ಟ; ಅಮಲ: ನಿರ್ಮಲ; ಸಾಧು: ಒಳ್ಳೆಯ ಜನ; ಅಸಾಧು: ಕೆಟ್ಟಜನ; ತೋರು: ಗೋಚರಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ಅವರು +ಕುಹಕ+ಉಪಾಯದಲಿ +ಕೌ
ರವರ +ಕೆಡಿಸದೆ +ಮಾಣರ್+ಅರ್ಜುನ
ಪವನಜರ +ಭಾಷೆಗಳ +ಮರೆದಿರೆ+ ಜೂಜು +ಸಭೆಯೊಳಗೆ
ಅವರು +ಸುಜನರು +ನಿಮ್ಮವರು +ಖಳರ್
ಅವರು +ಸದಮಲ+ ಸಾಧುಗಳು+ ಕೌ
ರವರ್+ಅಸಾಧುಗಳೆಂದು +ತೋರಿತೆ +ನಿಮ್ಮ +ಚಿತ್ತದಲಿ

ಅಚ್ಚರಿ:
(೧) ಸಾಧು, ಅಸಾಧು; ಸುಜನ, ಖಳ – ವಿರುದ್ಧ ಪದಗಳು

ಪದ್ಯ ೩೦: ಪ್ರಾತಿಕಾಮಿಕನು ಪಾಂಡವರಿಗೆ ಯಾವ ಸಂದೇಶವನ್ನು ಹೇಳಿದ?

ಬರವು ಬೇರೇನೊಡೆಯರಟ್ಟಿದ
ರರಸನಲ್ಲಿಗೆ ಹಿಂದೆ ಜೂಜಿನೊ
ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನಮುನಿಸು
ಹರೆದು ಹೋಯ್ತದು ಹೃದಯ ಶುದ್ಧಿಯೊ
ಳೆರಡರಸುಗಳು ಜೂಜನಾಡಲಿ
ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ (ಸಭಾ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು, ಧೃತರಾಷ್ಟ್ರನು ನನ್ನನ್ನು ನಿಮ್ಮಲ್ಲಿಗೆ ಕಳಿಸಿದ್ದಾನೆ. ಹಿಂದಾದ ಜೂಜಿನಲ್ಲಿ ಎರಡು ಪಕ್ಷದವರಿಗೂ ಕೋಪ, ಘರ್ಷಣೆಗಳು ಮಸೆದು ಮನಸ್ಸುಗಳು ಮುರಿದು ಹೋದವು. ಈಗ ನೀವು ಬಂದು ಹೃದಯ ಶುದ್ಧಿಯಿಂದ ವಿನೋದದ ಜೂಜನ್ನಾಡಲಿ ಎಂದು ತಿಳಿಸಿ ನಿಮ್ಮನ್ನು ಕರೆದುಕೊಂಡು ಹೋಗಲು ನನ್ನನ್ನು ಕಳಿಸಿದ್ದಾನೆ ಎಂದನು.

ಅರ್ಥ:
ಬರವು: ಆಗಮನ; ಬೇರೆ: ಅನ್ಯ; ಒಡೆಯ: ದೊರೆ; ಅಟ್ಟು: ಕಳುಹಿಸು; ಅರಸ: ರಾಜ; ಹಿಂದೆ: ಕಳೆದ, ಮುಂಚೆ; ಜೂಜು: ದ್ಯೂತ; ಒರಸು: ಅಳಿ, ನಾಶ; ಮಿಗೆ: ಮತ್ತು; ಮಸೆ: ದ್ವೇಷ, ಹಗೆ; ತಂಡ: ಗುಂಪು; ಮನ: ಮನಸ್ಸು; ಮುನಿಸು: ಕೋಪ, ಸಿಟ್ಟು; ಹರೆದು: ಸೀಳು; ಹೃದಯ: ಎದೆ; ಶುದ್ಧಿ: ದೋಷವಿಲ್ಲದಿರುವಿಕೆ, ಸ್ವಚ್ಛ; ಅರಸು: ರಾಜ; ಮರಳಿ: ಪುನಃ; ಬಿಜಯಂಗೈ: ಹೊರಡು;

ಪದವಿಂಗಡಣೆ:
ಬರವು +ಬೇರೇನ್+ಒಡೆಯರ್+ಅಟ್ಟಿದರ್
ಅರಸನ್+ಇಲ್ಲಿಗೆ+ ಹಿಂದೆ+ ಜೂಜಿನೊಳ್
ಒರಸೊರಸು +ಮಿಗೆ +ಮಸೆದುದಿತ್+ತಂಡಕ್ಕೆ +ಮನ+ಮುನಿಸು
ಹರೆದು +ಹೋಯ್ತದು +ಹೃದಯ +ಶುದ್ಧಿಯೊಳ್
ಎರಡ್+ಅರಸುಗಳು +ಜೂಜನಾಡಲಿ
ಮರಳಿ+ ಬಿಜಯಂಗೈವುದ್+ಎಂದ್+ಅಟ್ಟಿದನು +ಧೃತರಾಷ್ಟ್ರ

ಅಚ್ಚರಿ:
(೧) ಅಟ್ಟಿದ – ಪದದ ಬಳಕೆ, ೧,೬ ಸಾಲಿನ ಕೊನೆಯ ಪದಗಳು
(೨) ಒಡೆಯ, ಅರಸ – ಸಮನಾರ್ಥಕ ಪದ
(೩) ಹ ಕಾರದ ತ್ರಿವಳಿ ಪದ – ಹರೆದು ಹೋಯ್ತದು ಹೃದಯ