ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಝಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷದ ಬಗೆ ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨೬ ಪದ್ಯ)
ತಾತ್ಪರ್ಯ:
ಕ್ಷಮೆಗೂ ಒಂದು ಮಿತಿ ಇದೆ. ತನ್ನಲ್ಲಿ ಮುಳುಗಿದವನನ್ನು ನೀರು ಮೂರು ಬಾರಿ ಮಾತ್ರ ಮೇಲಕ್ಕೆತ್ತುತ್ತದೆ. ನಾಲ್ಕನೆಯ ಬಾರಿ ಝಾಡಿಸಿದರೆ ಮುಳುಗಿಸಿಯೇ ಬಿಡುತ್ತದೆ. ಅನ್ಯಾಯ ಮಿತಿಮೀರಿರುವ ಈಗ ನಾನೇನು ಮಾಡಲಿ, ಸೈರಣೆಗೂ ಒಂದು ಮಿತಿಯಿಲ್ಲವೇ? ಪೌರುಷವು ಬಂಜೆಯಾಯಿತೆ? ನ್ಯಾಯ ವಿಮರ್ಶೆಯಲ್ಲಿ ಮೆಲ್ಲನೆ ಜಾರಿಕೊಂಡು ಹೋಗುತ್ತಿರುವಿರಿ ಎಂದು ದ್ರೌಪದಿಯು ಹೇಳಿದಳು.
ಅರ್ಥ:
ನೀರು: ಜಲ; ಹೊರಗೆ: ಆಚೆ; ಬಾರಿ: ಸರದಿ; ಬಳಿಕ: ನಂತರ; ಪಾಪಿ: ದುಷ್ಟ; ಝಾಡಿಸು: ಜೋರಾಗಿ ತಳ್ಳು; ಸೈರಿಸು: ತಾಳ್ಮೆ; ಅನ್ಯಾಯ: ಸರಿಯಲ್ಲದ; ಬಹುಳತೆ: ಹೆಚ್ಚು; ಅವಧಿ: ಕಾಲ; ಪೌರುಷ: ವೀರತನ; ಬಗೆ: ರೀತಿ; ಬಂಜೆ: ಮಕ್ಕಳಿಲ್ಲದ ಸ್ಥಿತಿ; ಆರಯಿಕೆ: ನೋಡಿಕೊಳ್ಳು; ಜುಣುಗು: ಜಾರಿಕೊಳು; ಜಾರು: ಕೆಳಗೆ ಬೀಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;
ಪದವಿಂಗಡಣೆ:
ನೀರು +ಹೊರಗಿಕ್ಕುವುದು +ಮೂರೇ
ಬಾರಿ +ಬಳಿಕದು +ಪಾಪಿ +ಝಾಡಿಸೆ
ಸೈರಿಸದು+ ಅನ್ಯಾಯ +ಬಹುಳತೆಗೇನ+ ಮಾಡುವೆನು
ಸೈರಣೆಗೆ+ ತಾನ್+ಅವಧಿಯಿಲ್ಲಾ
ಪೌರುಷದ+ ಬಗೆ +ಬಂಜೆಯಾಯಿತು
ಆರಯಿಕೆಯಲಿ +ಜುಣುಗಿ +ಜಾರುವಿರೆಂದಳ್+ಇಂದುಮುಖಿ
ಅಚ್ಚರಿ:
(೧) ಲೋಕದ ನುಡಿ – ನೀರು ಹೊರಗಿಕ್ಕುವುದು ಮೂರೇಬಾರಿ ಬಳಿಕದು ಪಾಪಿ ಝಾಡಿಸೆ ಸೈರಿಸದು
(೨) ಪೌರುಷವು ಕಡಿಮೆಯಾಯಿತೆ ಎಂದು ಹೇಳಲು – ಪೌರುಷದ ಬಗೆ ಬಂಜೆಯಾಯಿತು