ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೦ ಪದ್ಯ)
ತಾತ್ಪರ್ಯ:
ನಿನ್ನ ಪ್ರಾಣ ಸ್ನೇಹಿತನಾದ ಕರ್ಣನು ಸತ್ತರೂ, ನೀನು ಬದುಕಿರುವೆ, ನಿನ್ನ ಸೋದರಮಾವ ಶಕುನಿ, ಮೈದುನ ಸೈಂಧವ, ತಮ್ಮ ದುಶ್ಯಾಸನ ಇವರೆಲ್ಲ ಸತ್ತರೂ ನೀನು ಬದುಕಿರುವೆ ಇಂತಹ ಜೀವನವು ಒಂದು ಜೀವನವೇ? ಇದೆಂಥ ಸ್ವಾಭಿಮಾನ ಹೀನತೆ? ಕೊಳವನ್ನು ಬಿಟ್ಟು ಹೊರಬಂದು ಆಯುಧವನ್ನು ಹಿಡಿ ಎಂದು ಪ್ರಚೋದಿಸಿದನು.
ಅರ್ಥ:
ಜೀವ: ಜೀವನ; ರಾಧೇಯ: ಕರ್ಣ; ಸಾವು: ಮರಣ; ಉಳಿ: ಬದುಕು; ಸೋದರಮಾವ: ತಾಯಿಯ ತಮ್ಮ; ಆದಿ: ಮುಂತಾದ; ನಿವಾಸ: ಆಲಯ; ಗರುವ: ಶ್ರೇಷ್ಠ; ಕೊಳ: ಸರಸಿ; ಹೊರವಡು: ಹೊರಗೆ ಬಾ; ಕೈದು: ಆಯುಧ;
ಪದವಿಂಗಡಣೆ:
ಜೀವಸಖ +ರಾಧೇಯನ್+ಆತನ
ಸಾವಿನಲಿ +ನೀನುಳಿದೆ +ಸೋದರ
ಮಾವ +ಶಕುನಿಯ +ಸೈಂಧವನ+ ದುಶ್ಯಾಸನಾದಿಗಳ
ಸಾವಿನಲಿ +ಹಿಂದುಳಿದ +ಜೀವನ
ಜೀವನವೆ +ಜೀವನ+ನಿವಾಸವ್
ಇದಾವ +ಗರುವಿಕೆ +ಕೊಳನ +ಹೊರವಡು +ಕೈದುಗೊಳ್ಳೆಂದ
ಅಚ್ಚರಿ:
(೧) ಜೀವನ ಪದದ ಬಳಕೆ – ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ