ಪದ್ಯ ೨೦: ನಿನ್ನದೆಂಥ ಜೀವನವೆಂದು ಧರ್ಮಜನೇಕೆ ಹಂಗಿಸಿದನು?

ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಿನ್ನ ಪ್ರಾಣ ಸ್ನೇಹಿತನಾದ ಕರ್ಣನು ಸತ್ತರೂ, ನೀನು ಬದುಕಿರುವೆ, ನಿನ್ನ ಸೋದರಮಾವ ಶಕುನಿ, ಮೈದುನ ಸೈಂಧವ, ತಮ್ಮ ದುಶ್ಯಾಸನ ಇವರೆಲ್ಲ ಸತ್ತರೂ ನೀನು ಬದುಕಿರುವೆ ಇಂತಹ ಜೀವನವು ಒಂದು ಜೀವನವೇ? ಇದೆಂಥ ಸ್ವಾಭಿಮಾನ ಹೀನತೆ? ಕೊಳವನ್ನು ಬಿಟ್ಟು ಹೊರಬಂದು ಆಯುಧವನ್ನು ಹಿಡಿ ಎಂದು ಪ್ರಚೋದಿಸಿದನು.

ಅರ್ಥ:
ಜೀವ: ಜೀವನ; ರಾಧೇಯ: ಕರ್ಣ; ಸಾವು: ಮರಣ; ಉಳಿ: ಬದುಕು; ಸೋದರಮಾವ: ತಾಯಿಯ ತಮ್ಮ; ಆದಿ: ಮುಂತಾದ; ನಿವಾಸ: ಆಲಯ; ಗರುವ: ಶ್ರೇಷ್ಠ; ಕೊಳ: ಸರಸಿ; ಹೊರವಡು: ಹೊರಗೆ ಬಾ; ಕೈದು: ಆಯುಧ;

ಪದವಿಂಗಡಣೆ:
ಜೀವಸಖ +ರಾಧೇಯನ್+ಆತನ
ಸಾವಿನಲಿ +ನೀನುಳಿದೆ +ಸೋದರ
ಮಾವ +ಶಕುನಿಯ +ಸೈಂಧವನ+ ದುಶ್ಯಾಸನಾದಿಗಳ
ಸಾವಿನಲಿ +ಹಿಂದುಳಿದ +ಜೀವನ
ಜೀವನವೆ +ಜೀವನ+ನಿವಾಸವ್
ಇದಾವ +ಗರುವಿಕೆ +ಕೊಳನ +ಹೊರವಡು +ಕೈದುಗೊಳ್ಳೆಂದ

ಅಚ್ಚರಿ:
(೧) ಜೀವನ ಪದದ ಬಳಕೆ – ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ

ಪದ್ಯ ೧೭: ಯಾರ ಮರಣದ ನಂತರ ಕರ್ಣನು ದುರ್ಯೋಧನನ ಕೈಹಿಡಿಯುತ್ತಾನೆ?

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಮ್ದನು ನಿನ್ನ ಮಗ ನಗುತ (ಶಲ್ಯ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮಾರ್ಜುನರೊಳಗೇ ದುಶ್ಯಾಸನನಿದ್ದಾನೆ. ನನ್ನ ಪ್ರಾಣಸ್ನೇಹಿತ ಕರ್ಣನು ಭೀಮಾರ್ಜುನರ ಮರಣದಿಂದ ಸಿದ್ಧಿಸಿ ನನ್ನ ಕೈಹಿಡಿಯುತ್ತಾನೆಂದು ನಿಶ್ಚಯಿಸಿದ್ದೇನೆ. ಕರ್ಣನ ಮರಣದ ಸುದ್ದಿಯನ್ನು ನಾಳೆ ತಿಳಿದುಕೊಳ್ಳುತ್ತೇನೆ ಎಂದು ದುರ್ಯೋಧನನು ನಗುತ್ತಾ ಹೇಳಿದನು.

ಅರ್ಥ:
ವೃಕೋದರ: ಭೀಮ; ಉದರ: ಹೊಟ್ಟೆ; ನರ: ಅರ್ಜುನ; ಅಂತರ್ಭಾವ: ಒಳಭಾವನೆ; ಜೀವ: ಪ್ರಾಣ; ಸಖ: ಸ್ನೇಹಿತ; ಮರಣ: ಸಾವು; ಸಿದ್ಧಿ: ಸಾಧನೆ; ಕೈವಿಡಿ: ಕೈಹಿಡಿ; ನಿಶ್ಚಯ: ನಿರ್ಧಾರ; ಸಾವು: ಮರಣ; ನಾಳೆ: ಮರುದಿನ; ಅರಿ: ತಿಳಿ; ಮಗ: ಸುತ; ನಗು: ಹರ್ಷ, ಸಂತಸ;

ಪದವಿಂಗಡಣೆ:
ಆ +ವೃಕೋದರ +ನರರೊಳ್+ಅಂತ
ರ್ಭಾವ +ದುಶ್ಯಾಸನಗೆ+ ತನ್ನಯ
ಜೀವಸಖಗಾ +ಭೀಮ +ಪಾರ್ಥರ +ಮರಣ+ಸಿದ್ಧಿಯಲಿ
ಕೈವಿಡಿಯಲೇ +ಕರ್ಣನಿಹನೆಂದ್
ಆವು +ನಿಶ್ಚಯಿಸಿದೆವು+ ಕರ್ಣನ
ಸಾವ +ನಾಳಿನೊಳ್+ಅರಿವೆನ್+ಎಂದನು +ನಿನ್ನ +ಮಗ +ನಗುತ

ಅಚ್ಚರಿ:
(೧) ವೃಕೋದರ, ಭೀಮ – ಭೀಮನನ್ನು ಕರೆದ ಪರಿ