ಪದ್ಯ ೪೧: ನಾರಾಯಣಾಸ್ತ್ರವು ಯಾವ ಪ್ರಮಾಣ ಮಾಡಿತು?

ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರವು, ನಾಚಿಕೆಯೇಕೆ, ಧರ್ಮಹಾನಿಯಾಯಿತೆಂಬ ನೋವೇಕೆ? ವೈದಿಕ ಲೌಕಿಕಗಳು ಏನು ಮಾಡಿಯಾವು? ಸಾಯುವುದಕ್ಕೆ ಯಾವ ಕುಲ? ಆಯುಧವನ್ನು ಹಿಡಿಯದವರನ್ನು ಹೆಂಗುಸನ್ನು ಮುಟ್ಟಿದರೆ ಶ್ರೀಕೃಷ್ಣ ಪಾದದಣೆ ಎಂದಿತು.

ಅರ್ಥ:
ನಾಚಿಕೆ: ಲಜ್ಜೆ, ಸಿಗ್ಗು; ಧರ್ಮ: ಧಾರಣೆ ಮಾಡಿದುದು; ಹಾನಿ: ನಷ್ಟ; ವ್ಯಾಕುಲ: ದುಃಖ, ವ್ಯಥೆ, ಗಾಬರಿ; ವೈದಿಕ: ವೇದಗಳನ್ನು ಬಲ್ಲವನು; ಲೌಕಿಕ: ಪ್ರಪಂಚಕ್ಕೆ ಸಂಬಂಧಿಸಿದ; ಏಗು: ನಿಭಾಯಿಸು; ಜೀವ: ಪ್ರಾಣ; ವ್ರಯ: ಖರ್ಚು; ಕುಲ: ವಂಶ; ಭಯ: ಅಂಜಿಕೆ; ಕೈದು: ಆಯುಧ; ನೂಕು: ತಳ್ಳು; ಹೆಂಗಸು: ಹೆಣ್ಣು; ಸೋಕು: ಮುಟ್ಟು; ಮುರಹರ: ಕೃಷ್ಣ; ಪದ: ಚರಣ; ಆಣೆ: ಪ್ರಮಾಣ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಏಕೆ+ ನಾಚಿಕೆ +ಧರ್ಮಹಾನಿ
ವ್ಯಾಕುಳತೆ+ಇನ್ನೇಕೆ +ವೈದಿಕ
ಲೌಕಿಕವದ್+ಏಗುವುವು +ಜೀವ+ವ್ರಯಕೆ +ಕುಲವುಂಟೆ
ಏಕೆ +ಭಯ +ನಮಗಿನ್ನು +ಕೈದುವ
ನೂಕಿದವರನು +ಹೆಂಗಸನು +ತಾ
ಸೋಕಿದರೆ +ಮುರಹರನ +ಪದದಾಣೆಂದುದ್+ಅಮಳಾಸ್ತ್ರ

ಅಚ್ಚರಿ:
(೧) ಸಾವು ಅಂತ ಹೇಳಲು ಜೀವವ್ರಯ ಪದದ ಬಳಕೆ
(೨) ಆಯುಧವಿಲ್ಲದವರನ್ನು ಎಂದು ಹೇಳಲು ಕೈದುವ ನೂಕಿದವರನು ಪದದ ಬಳಕೆ