ಪದ್ಯ ೧೧: ಯಾವ ರೀತಿಯ ಜನರು ಯಾಗಶಾಲೆಯಲ್ಲಿ ನೆರೆದಿದ್ದರು?

ವಿಕಳ ವಾಮನ ಮೂಕ ಬಧಿರಾಂ
ಧಕರು ಮಾಗಧ ಸೂತ ವಂದಿ
ಪ್ರಕರ ಮಲ್ಲ ಮಹೇಂದ್ರ ಜಾಲಿ ಮಹಾಹಿತುಂಡಿತರು
ಸುಕವಿ ತಾರ್ಕಿಕ ವಾಗ್ಮಿ ವೈತಾ
ಳಿಕ ಸುಗಾಯಕ ಕಥಕ ಮಾರ್ದಂ
ಗಿಕರು ನೆರೆದುದು ನಿಖಿಳ ಯಾಚಕ ನಿಕರ ಸಂದಣಿಸಿ (ಸಭಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಯಾಗಶಾಲೆಯಲ್ಲಿ ಎಲ್ಲಾ ರೀತಿಯ ಜನರು ಸೇರಿದ್ದರು, ವಿಕಲಾಂಗರು, ಕುಬ್ಜರು (ಕುಳ್ಳ), ಮೂಕರು, ಕಿವುಡರು, ಕುರುಡರು, ವಂದಿಮಾಗಧರು, ರಥವನ್ನು ನಡೆಸುವವರು, ಜಟ್ಟಿಗಳು, ಮಹೇಂದ್ರಜಾಲವನ್ನು ಮಾಡುವವರು, ಹಾವಾಡಿಗರು, ಕವಿಗಳು, ತರ್ಕವಿಶಾರದರು, ವಾಗ್ಮಿಗಳು, ಮಂಗಳ ಪಾಠಕರು, ಗಾಯಕರು, ಕಥಾ ಕಲಾಕ್ಷೇಪ ಮಾದುವವರು, ಮೃದಂಗವಾದಕರು, ಯಾಚಕರು ಅಲ್ಲಿ ಸೇರಿದ್ದರು.

ಅರ್ಥ:
ವಿಕಳ: ಅಂಗವಿಕಲರು; ವಾಮನ: ಕುಬ್ಜ; ಮೂಕ: ಮಾತುಬಾರದವ; ಬಧಿರ: ಕಿವುಡರು; ಅಂಧಕ: ಕುರುಡರು; ಮಾಗಧ: ವಂದಿಮಾಗಧರು; ಮಾಗಧ: ಹೊಗಳುಭಟ್ಟ; ಸೂತ: ರಥವನ್ನು ನಡೆಸುವವನು; ವಂದಿ:ಹೊಗಳು ಭಟ್ಟ; ಪ್ರಕರ: ಗುಂಪು; ಮಲ್ಲ: ಜಟ್ಟಿ; ಮಹೇಂದ್ರಜಾಲಿ: ಇಂದ್ರಜಾಲ ಮಾಡುವವ; ಅಹಿ: ಹಾವು; ತುಂಡಿತರು: ಮಹಾಹಿ: ಶ್ರೇಷ್ಠವಾದ ಹಾವು; ತುಂಡಿತರು: ಆಡಿಸುವವರು; ಸುಕವಿ: ಶ್ರೇಷ್ಠವಾದ ಕವಿ; ತಾರ್ಕಿಕ: ತರ್ಕವಿಶಾರದರು; ವಾಗ್ಮಿ: ಚೆನ್ನಾಗಿ ಮಾತಾಡುವ; ವೈತಾಳಿಕ: ಮಂಗಳಪಾಠಕರು; ಸುಗಾಯಕ: ಚೆನ್ನಾಗಿ ಹಾಡುವವ; ಕಥಕ:ಕಥೆಯನ್ನು ಹೇಳುವವರು; ಮಾರ್ದಂಗಿಕರು: ಮೃದಂಗವಾದಗಕರು; ನೆರೆ: ಸೇರು; ನಿಖಿಳ: ಎಲ್ಲಾ; ಯಾಚಕ: ಬೇಡುವವನು; ಸಂದಣಿಸು: ಸೇರು; ನಿಕರ: ಗುಂಪು;

ಪದವಿಂಗಡಣೆ:
ವಿಕಳ+ ವಾಮನ+ ಮೂಕ +ಬಧಿರ
ಅಂಧಕರು +ಮಾಗಧ+ ಸೂತ +ವಂದಿ
ಪ್ರಕರ+ ಮಲ್ಲ +ಮಹೇಂದ್ರ +ಜಾಲಿ +ಮಹ+ಅಹಿತುಂಡಿತರು
ಸುಕವಿ+ ತಾರ್ಕಿಕ +ವಾಗ್ಮಿ +ವೈತಾ
ಳಿಕ +ಸುಗಾಯಕ +ಕಥಕ +ಮಾರ್ದಂ
ಗಿಕರು +ನೆರೆದುದು +ನಿಖಿಳ +ಯಾಚಕ+ ನಿಕರ+ ಸಂದಣಿಸಿ

ಅಚ್ಚರಿ:
(೧) ೧೮ ರೀತಿಯ ಜನರನ್ನು ಹೇಳಿರುವುದು