ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲಿ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ (ಗದಾ ಪರ್ವ, ೧೦ ಸಂಧಿ, ೭ ಪದ್ಯ)
ತಾತ್ಪರ್ಯ:
ದೈವ ಕೃಪೆಯ ತೆರೆಯ ಮರೆಯಲ್ಲಿ ಪಾಂಡವರೈವರು ಉಳಿದರು. ಕೃಷ್ಣನ ಒಡಹುಟ್ಟಿದ ಸಾತ್ಯಕಿಯೂ ಪಾಳೆಯದಲ್ಲಿರಲಿಲ್ಲ. ದೈವಬಲ ಅವರನ್ನು ಕಾಪಾಡಿತು. ಉಳಿದ ಪಾಂಡವ ಸೇನೆಯು ದೈವ ಬಲವಿಲ್ಲದೆ, ಛಲದ ಸೇಡಿಗೆ ನಾಶವಾಯಿತೆಂದು ಹೇಳಿದನು.
ಅರ್ಥ:
ದೈವ: ಭಗವಂತ; ಕೃಪೆ: ಕರುಣೆ; ಜವನಿಕೆ: ಮುಚ್ಚುಮರೆ; ಮರೆ: ರಹಸ್ಯ; ಉಳಿ: ಜೀವಿಸು; ಒಡಹುಟ್ಟು: ಜೊತೆಯಲ್ಲಿ ಜನಿಸು; ಶಿಬಿರ: ಬಿಡಾರ; ಬಲ: ಶಕ್ತಿ; ಕೇಳ್: ಆಲಿಸು; ನಿರ್ದೈವ: ಭಗವಂತನಿಲ್ಲದ ಸ್ಥಿತಿ; ನಿಶ್ಶೇಷ: ಸಂಪೂರ್ಣವಾಗಿ ಮುಗಿದುದು, ನಾಶ; ಎತ್ತು: ಮೇಲೇಳು; ಛಲ: ದೃಢ ನಿಶ್ಚಯ; ವಾಸಿ: ಪ್ರತಿಜ್ಞೆ, ಶಪಥ; ರಾಯ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ದೈವ+ಕೃಪೆ+ಜವನಿಕೆಯ +ಮರೆಗೊಂಡ್
ಐವರ್+ಉಳಿದರು +ಮೇಲೆ +ಸಾತ್ಯಕಿ
ದೈವದ್+ಒಡಹುಟ್ಟಿದನಲೇ +ತಾನಿಲ್ಲಿ +ಶಿಬಿರದಲಿ
ದೈವಬಲವ್+ಇನಿತಕ್ಕೆ+ ಕೇಳ್ +ನಿ
ರ್ದೈವಬಲ+ನಿಶ್ಶೇಷವ್+ಇನಿತೇ
ದೈವವೆತ್ತಿದ+ ಛಲದ +ವಾಸಿಗೆ +ರಾಯ +ಕೇಳೆಂದ
ಅಚ್ಚರಿ:
(೧) ದೈವ – ೫ ಸಾಲಿನ ಮೊದಲ ಪದ
(೨) ಪದಗಳ ಬಳಕೆ – ದೈವಬಲವಿನಿತಕ್ಕೆ, ನಿರ್ದೈವಬಲನಿಶ್ಶೇಷವಿನಿತೇ