ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ (ದ್ರೋಣ ಪರ್ವ, ೭ ಸಂಧಿ, ೧೩ ಪದ್ಯ)
ತಾತ್ಪರ್ಯ:
ಅಳಲಿನ ಬೆಂಕಿಯಿಂದ ಬಾಡಿದ ಮುಖಕಮಲದಲ್ಲಿ ಕಡುವೇದನೆ ಎದ್ದು ಕಾಣುತ್ತಿತ್ತು. ಎತ್ತಿದ ದನಿಯಲ್ಲಿ ಹಾಹಾಕಾರ ಮಾಡುತ್ತಾ ಭಯಂಕರ ವ್ಯಥೆಯಿಂದ ನೊಂದ ಸುಭದ್ರೆಯು ಬಂದು, ಸಭೆಯ ನಡುವೆ ಧೊಪ್ಪನೆ ಬಿದ್ದು, ನನ್ನ ಮಗನನ್ನು ಯುದ್ಧಕ್ಕೆ ಕಳಿಸಿದವರ ಇಷ್ಟವು ಪೂರ್ತಿಯಾಯಿತೇ? ಎಂದು ದುಃಖಿಸಿದಳು.
ಅರ್ಥ:
ಅಳಲು: ದುಃಖ; ಶಿಖಿ: ಬೆಂಕಿ; ಬಾಡು: ಸೊರಗು; ಆನನ: ಮುಖ; ಜಲ: ನೀರು; ಜಲರುಹ: ಕಮಲ; ಕಡು: ಬಹಳ; ವೇದನೆ: ದುಃಖ; ಕಳಕಳ: ಗೊಂದಲ; ರವ: ಶಬ್ದ; ರೌದ್ರ: ಸಿಟ್ಟು, ರೋಷ; ನಡೆತಂದು: ಬಂದು ಸೇರು; ನೆಲ: ಭೂಮಿ; ಧೊಪ್ಪನೆ: ಒಮ್ಮೆಲೆ; ಕೆಡೆ:ಬೀಳು, ಕುಸಿ; ಸಭೆ: ಓಲಗ; ಹಲುಬು: ದುಃಖಪಡು; ಕೊಳುಗುಳ: ಯುದ್ಧ; ಕಂದ: ಮಗು; ಕಳುಹು: ತೆರಳು; ಸಂದು: ಅವಕಾಶ, ಸಂದರ್ಭ; ಪರಿಣಾಮ: ಫಲ;
ಪದವಿಂಗಡಣೆ:
ಅಳಲ +ಶಿಖಿಯಲಿ +ಬಾಡಿದ್+ಆನನ
ಜಲರುಹದ +ಕಡುವೇದನೆಯ +ಕಳ
ಕಳದ +ಹಾಹಾ +ರವದ +ರೌದ್ರೆ +ಸುಭದ್ರೆ +ನಡೆತಂದು
ನೆಲಕೆ+ ಧೊಪ್ಪನೆ +ಕೆಡೆದು +ಸಭೆಯಲಿ
ಹಲುಬಿದಳು +ಕೊಳುಗುಳಕೆ+ ಕಂದನ
ಕಳುಹಿದವರಿಗೆ+ ಸಂದುದೇ +ಪರಿಣಾಮವ್+ಎಂದೆನುತ
ಅಚ್ಚರಿ:
(೧) ಸುಭದ್ರೆಯ ಮುಖದ ವರ್ಣನೆ – ಅಳಲ ಶಿಖಿಯಲಿ ಬಾಡಿದಾನನಜಲರುಹದ
(೨) ದುಃಖವನ್ನು ವ್ಯಕ್ತಪಡಿಸುವ ಪರಿ – ಹಲುಬಿದಳು ಕೊಳುಗುಳಕೆ ಕಂದನ ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ