ಪದ್ಯ ೧೬: ಸಹದೇವನ ನಂತರ ಧರ್ಮರಾಯನು ಯಾರನ್ನು ಪಣಕ್ಕೆ ಒಡ್ಡಿದನು?

ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸಹದೇವನನ್ನು ಸೋತ ಮೇಲೆ ಶಕುನಿಯು ದಾಳಗಳನ್ನು ಹೊಸೆದು, ಈ ಹಲಗೆಯಲ್ಲಿ ಯುಧಿಷ್ಠಿರನು ಸೋತ ಎಲ್ಲವನ್ನೂ ಗೆಲ್ಲಲು ಕಿರಿಯ ತಮ್ಮನನ್ನು ಒಡ್ಡಿದ್ದಾನೆ, ನನ್ನ ರಾಜಾ, ಗರವೆ ಬಾ, ಜಯಲಕ್ಷ್ಮಿಯೇ ಬಾ, ಕೌರವನ ಉನ್ನತಿಯ ಸಿದ್ಧಿಯೇ ಬಾ ಎಂದು ಶಕುನಿಯು ಗರ್ಜಿಸಿದನು.

ಅರ್ಥ:
ಹರಿಬ: ಕೆಲಸ, ಕಾರ್ಯ, ಯುದ್ಧ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಮರಳಿ: ಮತ್ತೆ, ಪುನಃ; ಮಹೀಪತಿ: ರಾಜ; ಕಿರಿಯ: ಚಿಕ್ಕ; ತಮ್ಮ: ಸಹೋದರ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕುಮಾರ: ಪುತ್ರ; ಅರಸ: ರಾಜ; ದಾಯ: ಪಗಡೆಯ ಗರ; ಜಯ: ಗೆಲುವು; ಜಯಾಂಗದಸಿರಿ: ಜಯಲಕ್ಷ್ಮಿ; ಉತ್ಕರ: ಉನ್ನತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬಾ: ಆಗಮಿಸು; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಹರಿಬದಲಿ+ ತನ್+ಅಖಿಳ +ವಸ್ತು
ಉತ್ಕರವ +ಮರಳಿಚುವನು+ ಮಹೀಪತಿ
ಕಿರಿಯ +ತಮ್ಮನವ್+ಒಡ್ಡಿದನು +ಮಾದ್ರೀ +ಕುಮಾರಕನ
ಅರಸು +ದಾಯವೆ +ಬಾ +ಜಯಾಂಗದ
ಸಿರಿಯೆ +ಬಾ +ಕುರುರಾಯ +ರಾಜ
ಉತ್ಕರದ+ ಸಿದ್ಧಿಯೆ+ ಬಾ+ಎನುತ +ಗರ್ಜಿಸಿದನಾ +ಶಕುನಿ

ಅಚ್ಚರಿ:
(೧) ಶಕುನಿಯು ದಾಳವನ್ನು ಹಾಕುವ ಪರಿ – ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ